ಸಿಬಿಐ ಮುಖ್ಯಸ್ಥ ನಾಗೇಶ್ವರ ರಾವ್
ನವದೆಹಲಿ: ಬಿಹಾರ ವಸತಿ ನಿಲಯಗಳಲ್ಲಿನ ಲೈಂಗಿಕ ಕಿರುಕುಳ ಸಂಬಂಧದ ತನಿಖೆಯಲ್ಲಿ ದಿವ್ಯ ನಿರ್ಲಕ್ಷ್ಯ ತೋರಿದ ಆರೋಪದ ಮೇರೆಗೆ ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿದ್ದ ಸಿಬಿಐ ಮುಖ್ಯಸ್ಥ ಎಂ ನಾಗೇಶ್ವರ ರಾವ್ ದೋಷಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಅವರಿಗೆ ನೀಡಿದ ಶಿಕ್ಷೆ ಮಾತ್ರ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಹೌದು ಇಂದು ಎಂ ನಾಗೇಶ್ವರ್ ರಾವ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ಅಂತಿಮ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರು, ನ್ಯಾಯಾಲಯ ಆದೇಶವನ್ನು ತಿರಸ್ಕರಿಸಿದ ವಿಚಾರಕ್ಕೆ ಸಂಬಂಧಿಸಿ ಮಾಜಿ ಹಂಗಾಮಿ ಸಿಬಿಐ ಹೆಚ್ಚುವರಿ ನಿರ್ದೇಶಕ ನಾಗೇಶ್ವರ ರಾವ್ ಹಾಗೂ ಸಿಬಿಐ ಕಾನೂನು ಸಲಹೆಗಾರ ಬಾಸು ರಾಮ್ ಅಪರಾಧಿ ಎಂದು ತೀರ್ಪು ನೀಡಿದ್ದಾರೆ.
ನಾಗೇಶ್ವರ್ ರಾವ್ ಹಾಗೂ ಸಿಬಿಐ ಕಾನೂನು ಸಲಹೆಗಾರ ಬಾಸು ರಾಮ್ ಅವರನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದಾರೆ. ಅಲ್ಲದೆ ನಾಗೇಶ್ವರ ರಾವ್ ಅವರಿಗೆ 1 ಲಕ್ಷ ರೂ ದಂಡ ವಿಧಿಸಿದ್ದು ಹಾಗೂ ಇಬ್ಬರೂ ತಾವು ಕರೆಯುವ ವರೆಗೂ ಕೋರ್ಟ್ ಹಾಲ್ ನ ಮೂಲೆಯಲ್ಲಿ ಕುಳಿಕುಕೊಂಡಿರಬೇಕು ಎಂದು ಅಚ್ಚರಿ ಶಿಕ್ಷೆ ನೀಡಿದ್ದಾರೆ.
ಅವರ ವಿರುದ್ಧದ ಯಾವುದೇ ಕ್ರಮದಿಂದ ಅವರ ವೃತ್ತಿ ಜೀವನಕ್ಕೆ ಕಪ್ಪು ಚುಕ್ಕೆ: ಅಟಾರ್ನಿ ಜನರಲ್ ಮನವಿ
ಇದಕ್ಕೂ ಮೊದಲು ಇಂದಿನ ವಿಚಾರಣೆಯಲ್ಲಿ ನಾಗೇಶ್ಪರ ರಾವ್ ಅವರ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು, ಈ ಹಿಂದೆಯೇ ಸಿಬಿಐ ಇದು ಉದ್ದೇಶಪೂರ್ವಕವಾಗಿ ನಡೆದ ತಪ್ಪಲ್ಲ. ಈ ಕುರಿತು ಈಗಾಗಲೇ ಅವರು ಬೇಷರತ್ ಕ್ಷಮೆ ಕೂಡ ಯಾಚಿಸಿದ್ದಾರೆ. ಹೀಗಾಗಿ ಅವರ ಕ್ಷಮೆ ಸ್ವೀಕರಿಸಬೇಕು. ಅವರ ವಿರುದ್ಧದ ಯಾವುದೇ ಕ್ರಮದಿಂದ ಅವರ ವೃತ್ತಿ ಜೀವನಕ್ಕೆ ಕಪ್ಪು ಚುಕ್ಕೆ ಉಂಟಾಗುತ್ತದೆ ಎಂದು ಮನವಿ ಮಾಡಿಕೊಂಡರು. ಆದರೆ ಈ ವಾದಕ್ಕೆ ಸಿಜೆಐ ಮನ್ನಣೆ ನೀಡಲಿಲ್ಲ.
ಇನ್ನು ಈ ಹಿಂದೆ ನ್ಯಾಯಾಲಯವು ಅರುಣ್ ಕುಮಾರ್ ಶರ್ಮಾರನ್ನು ವರ್ಗಾವಣೆ ಮಾಡದಂತೆ ಆದೇಶಿಸಿತ್ತು. ಆದರೆ ನಾಗೇಶ್ವರ ರಾವ್ ಅವರು ಸುಪ್ರೀಂಕೋರ್ಟ್ ಆದೇಶವನ್ನು ದಿಕ್ಕರಿಸಿ ಬಿಹಾರದ ಮುಜಫ್ಫರ್ ಪುರ್ ಬಾಲಗೃಹದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದ ಸಿಬಿಐ ಜಂಟಿ ನಿರ್ದೇಶಕ ಅರುಣ್ ಕುಮಾರ್ ಶರ್ಮಾರನ್ನು ವರ್ಗಾವಣೆ ಮಾಡಿದ್ದರು.
ಈ ಸಂಬಂಧ ಅವರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಈ ಹಿಂದೆ ರಾವ್ ಅವರು ನ್ಯಾಯಾಲಯಕ್ಕೆ ಬೇಷರತ್ ಕ್ಷಮೆಯಾಚನೆ ಮಾಡಿದ್ದರಾದರೂ, ಅವರ ಕ್ಷಮೆಯನ್ನು ಕೋರ್ಟ್ ತಿರಸ್ಕರಿಸಿತು. ಅಲ್ಲದೆ ಇದು ಉದ್ದೇಶ ಪೂರ್ವಕ ತಪ್ಪು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರು ಅಭಿಪ್ರಾಯಪಟ್ಟರು. 'ಶರ್ಮಾರನ್ನು ಮುಝಫ್ಫರ್ ಪುರ ಬಾಲಗೃಹ ಪ್ರಕರಣದ ತನಿಖೆಯಿಂದ ವರ್ಗಾವಣೆ ಮಾಡದಂತೆ ತಾನು ಎರಡು ಬಾರಿ ಆದೇಶ ನೀಡಿದ್ದರೂ ರಾವ್ ಭಾರೀ ಅವಸರ ಪ್ರದರ್ಶಿಸಿದರು. ಶರ್ಮಾರನ್ನು ವರ್ಗಾವಣೆ ಮಾಡಿ ನ್ಯಾಯಾಲಯದ ಆದೇಶವನ್ನು ಕಡೆಗಣಿಸಿದ್ದಾರೆ ಎಂದು ರಂಜನ್ ಗಗೋಯ್ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos