ದೇಶ

ಸೌದಿ ಅರೇಬಿಯಾ ರಾಜ ಇಂದು ಭಾರತಕ್ಕೆ ಆಗಮನ: ಗಡಿಯಾಚೆಗಿನ ಭಯೋತ್ಪಾದನೆ ಪ್ರಸ್ತಾಪ ಸಾಧ್ಯತೆ

Nagaraja AB

ನವದೆಹಲಿ: ಸೌದಿ ಅರಬೀಯಾ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಎರಡು ದಿನಗಳ ಕಾಲ ಭಾರತಕ್ಕೆ ಆಗಮಿಸಲಿದ್ದು,ಜಂಟಿ ನೌಕಾ ಕಾರ್ಯಾಚರಣೆ ಸೇರಿದಂತೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ಭಾರತ  ಬಲವಾಗಿ ಪ್ರಸ್ತಾಪಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳ ಮೂಲಗಳಿಂದ ತಿಳಿದುಬಂದಿದೆ.

ದಕ್ಷಿಣ ಏಷ್ಯಾ ರಾಷ್ಟ್ರಗಳ ಪ್ರವಾಸದಲ್ಲಿರುವ ಸೌದಿ ಅರಬೀಯಾ ರಾಜ ಭಾನುವಾರ ರಾತ್ರಿ ಇಸ್ಲಾಮಾಬಾದಿಂದ ಸೋಮವಾರ  ಸೌದಿ ಅರಬೀಯಾಕ್ಕೆ ತೆರಳಿದ್ದು, ಇಂದು ದೆಹಲಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ

ಸೌದಿ ಅರಬೀಯಾ ರಾಜನ ಭೇಟಿ ಹಿನ್ನೆಲೆಯಲ್ಲಿ ಇಸ್ಲಾಮಾಬಾದಿನಲ್ಲಿ ನಿನ್ನೆ ಮಾತನಾಡಿದ ಸೌದಿ ಅರಬೀಯಾ ವಿದೇಶಾಂಗ ವ್ಯವಹಾರ ಸಚಿವ ಅದೆಲ್ ಅಲ್ ಜುಬಿರ್,  ಪುಲ್ವಾಮಾದಲ್ಲಿ ಜೈಷ್ -ಇ- ಮೊಹಮ್ಮದ್ ಉಗ್ರ ಸಂಘಟನೆ  ದಾಳಿ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಉಂಟಾಗಿರುವ ಉದ್ವಿಘ್ನ ಪರಿಸ್ಥಿತಿ ನಿಯಂತ್ರಿಸಲು ರಿಯಾದ್ ಪ್ರಯತ್ನಿಸಲಿದ್ದಾರೆ ಎಂದು ಹೇಳಿದ್ದಾರೆ.

ಬುಧವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಸೌದಿ ಅರಬೀಯಾ ರಾಜನ ನಡುವೆ ನಡೆಯಲಿರುವ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ಬಗ್ಗೆ ಭಾರತ ಬಲವಾಗಿ ಪ್ರಸ್ತಾಪಿಸುವ ಸಾಧ್ಯತೆ ಇದೆ.ಉಭಯ ನಾಯಕರ ನಡುವಿನ ಮಾತುಕತೆಯ ನಂತರ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹೂಡಿಕೆ,ಪ್ರವಾಸೋದ್ಯಮ,ವಸತಿ ,ಮಾಹಿತಿ ಮತ್ತು ಪ್ರಸಾರ ಸೇರಿದಂತೆ ಐದು ಕ್ಷೇತ್ರಗಳಲ್ಲಿ ಉಭಯ ಕ್ಷೇತ್ರಗಳ ನಡುವೆ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ ಎಂದು ವಿದೇಶಾಂಗ ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಟಿ.ಎಸ್. ತಿರುಮೂರ್ತಿ ಹೇಳಿದ್ದಾರೆ.

ಸೌದಿ ಅರಬೀಯಾ ರಾಜನ ಭೇಟಿಯಿಂದ ದ್ವೀಪಕ್ಷೀಯ ಸಂಬಂಧ ವೃದ್ಧಿಯಲ್ಲಿ ಹೊಸ ಅಧ್ಯಾಯವೊಂದು ಪ್ರಾರಂಭವಾಗಲಿದೆ ಎಂಬ ವಿಶ್ವಾಸ ಹೊಂದಿರುವುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.ಭಾರತ ಭೇಟಿ ನಂತರ ಸೌದಿ ಅರಬೀಯಾ ರಾಜ ಚೀನಾಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

SCROLL FOR NEXT