ಇಟಾ ನಗರ: ಆರು ಸಮುದಾಯಕ್ಕೆ ಶಾಶ್ವತ ನಿವಾಸಿ ಪ್ರಮಾಣ ಪತ್ರ ನೀಡುವ ಅರುಣಾಚಲ ಪ್ರದೇಶ ಸರ್ಕಾರದ ಪ್ರಸ್ತಾವನೆಗೆ ಅರುಣಾಚಲ ಪ್ರದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ.
ಶುಕ್ರವಾರ ಆರಂಭವಾದ ಪ್ರತಿಭಟನೆಯಿಂದಾಗಿ ಇಲ್ಲಿಯವರೆಗೆ ಮೂವರು ಸಾವಿಗೀಡಾಗಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಉಲ್ಬಣಗೊಂಡಿರುವ ಸಂದಿಗ್ಧ ಪರಿಸ್ಥಿತಿಯನ್ನು ಹತೋಟಿಗೆ ತರುವ ಸಲುವಾಗಿ ಮುಖ್ಯಮಂತ್ರಿ ಪೆಮ ಖಂಡು ಅವರು ನಾಳೆ ಸರ್ವ ಪಕ್ಷಗಳ ಸಭೆಯನ್ನು ಕರೆದಿದ್ದಾರೆ.
ಇನ್ನು ಇಂದು ಮಧ್ಯಾಹ್ನ ಪ್ರತಿಭಟನಾಕಾರರು ಉಪ ಮುಖ್ಯಮಂತ್ರಿ ಮೇನ್ ಅವರ ಖಾಸಗಿ ಮನೆಗೆ ಬೆಂಕಿ ಇಟ್ಟಿದ್ದು, ಮನೆಯ ಬಳಿ ನಿಂತಿದ್ದ ವಾಹನವನ್ನು ಕೂಡ ಸಂಪೂರ್ಣ ಸುಟ್ಟು ಹಾಕಿದ್ದಾರೆ. ಅದೇ ವೇಳೆಯಲ್ಲಿ ಮುಖ್ಯಮಂತ್ರಿ ಪೆಮ ಖಂಡು ಅವರ ಸರ್ಕಾರಿ ನಿವಾಸದ ಎದುರು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಹಾಗೂ ಪ್ರತಿಭಟನಾರರ ನಡುವೆ ಮಾತಿನ ಚಕಮಕಿಯೂ ನಡೆದಿದ್ದು, ಅರುಣಾಚಲ ಪ್ರದೇಶದಲ್ಲಿ ಪರಿಸ್ಥಿತಿ ತೀವ್ರ ಉಲ್ಬಣಿಸಿದೆ.
ಅರುಣಾಚಲ ಪ್ರದೇಶದವರಲ್ಲದ ಸುಮಾರು ಆರು ಸಮುದಾಯದವರು ಕಳೆದ ಕೆಲ ವರ್ಷಗಳಿಂದ ನಮ್ಸಾಯ್ ಮತ್ತು ಛಾಂಗ್ಲ್ಯಾಂಗ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದು, ಅವರಿಗೆ ಪರಿಶಿಷ್ಟ ಪಂಗಡ(Schedule Tribe) ಸ್ಥಾನಮಾನ ನೀಡಲು ಸರ್ಕಾರದ ಜಂಟಿ ಉನ್ನತ ಸಮಿತಿ ಶುಕ್ರವಾರ ಶಿಫಾರಸು ಮಾಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ರಾಜ್ಯದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಸಂಘಟನೆಗಳು, ವಿದ್ಯಾರ್ಥಿಗಳು ಮತ್ತು ಸಂಸ್ಥೆಗಳು ಸಮಿತಿಯ ಶಿಫಾರಸನ್ನು ವಿರೋಧಿಸುತ್ತಿವೆ. ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೆ, ಸ್ಥಳೀಯ ಜನರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಪ್ರತಿಭಟನಾಕಾರರು ಬೇಡಿಕೆ ಇಟ್ಟಿದ್ದಾರೆ.
ಶನಿವಾರ ಪ್ರತಿಭಟನಾ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದರಿಂದ ಸುಮಾರು 35 ಮಂದಿ ಸ್ಥಳೀಯರು ಹಾಗೂ 24 ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದರು. ಇದರಿಂದಾಗಿ ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರ ಹಾಗೂ ನಹರ್ಲಾಗುನ್ ಪ್ರದೇಶದಲ್ಲಿ ಕರ್ಪ್ಯೂ ಕೂಡ ಏರಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos