ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರ ಕ್ಯಾಂಪ್ ಗಳ ಮೇಲೆ ಭಾರತೀಯ ವಾಯು ಸೇನೆ ನಡೆಸಿದ ವಾಯುದಾಳಿ ಬೆನ್ನಲ್ಲೇ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದಿಂದ ಪ್ರತಿದಾಳಿಯಾಗಬಹುದು ಎಂದು ಜನತೆ ಆತಂಕದಲ್ಲಿದ್ದು, ಈ ಬಗ್ಗೆ ಕಾಶ್ಮೀರ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ.
ಪಿಒಕೆಯಲ್ಲಿನ ಜೈಶ್ ಇ ಮಹಮದ್ ಉಗ್ರ ಕ್ಯಾಂಪ್ ಗಳ ಮೇಲೆ ಭಾರತೀಯ ವಾಯು ಸೇನೆ ದಾಳಿ ಮಾಡಿ ನೂರಾರು ಉಗ್ರರನ್ನು ಕೊಂದು ಹಾಕಿದ ಬೆನ್ನಲ್ಲೇ ಇತ್ತ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅತ್ತ ಭಾರತೀಯ ವಾಯುಸೇನೆ ಪಾಕ್ ಗಡಿಯಲ್ಲಿ ದಾಳಿ ಮಾಡುತ್ತಿದ್ದಂತೆಯೇ ಇತ್ತ ಇಂಡೋ-ಪಾಕ್ ಗಡಿಯಲ್ಲಿನ ಸ್ಥಳೀಯರು ಪಾಕಿಸ್ತಾನ ಸೇನೆ ಪ್ರತಿದಾಳಿ ನಡೆಸಬಹುದು ಎಂಬ ಆತಂಕ ಸೃಷ್ಟಿಯಾಗಿದೆ.
ಇದರ ಬೆನ್ನಲ್ಲೇ ಕಾಶ್ನೀರ ಸರ್ಕಾರ ತನ್ನ ಜನತೆಗೆ ಹೇಳಿಕೆ ಬಿಡುಗಡೆ ಮಾಡಿದ್ದು, ವಾಯುದಾಳಿಯ ಬಳಿಕ ರಾಜ್ಯದಲ್ಲಿ ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ಪಾಕಿಸ್ತಾನದ ಯಾವುದೇ ರೀತಿಯ ದಾಳಿಗಳಿಗೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡಲಿದೆ. ಹೀಗಾಗಿ ಕಣಿವೆ ರಾಜ್ಯದ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಶ್ಮೀರ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಆತಂಕ ವ್ಯಕ್ತಪಡಿಸಿ, ಏಷ್ಯಾ ಖಂಡದ ಎರಡು ಅಣ್ವಸ್ಕ್ರಗಳ ದೇಶಗಳ ನಡುವಿನ ಯುದ್ಧ ತೀರಾ ಪ್ರಮಾದಕರ ಎಂದು ಹೇಳಿದ್ದರು.