ನವದೆಹಲಿ: ಭಾರತೀಯ ವಾಯುಸೇನೆ ಯೋಧ ಅಭಿನಂದನ್ ರನ್ನು ಪಾಕಿಸ್ತಾನ ಬಂಧಿಸಿದ ಬೆನ್ನಲ್ಲೇ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಬಂಧನಕ್ಕೀಡಾಗಿ ಬಿಡುಗಡೆಯಾಗಿದ್ದ ಯೋಧ ನಚಿಕೇತ್ ಅವರ ನೆನಪಾಗುತ್ತಿದೆ..
ಇಷ್ಟಕ್ಕೂ ಯಾರೂ ಈ ನಚಿಕೇತ್.. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಏನಾಗಿತ್ತು..?
ಪ್ರಸ್ತುತ ಅಭಿನಂದನ್ ಬಂಧನ ಪ್ರಕರಣ ಇವೆಲ್ಲ ಘಟನಾವಳಿಯು 1999ರ ಕಾರ್ಗಿಲ್ ಯುದ್ಧದ ಸಂದರ್ಭವೊಂದನ್ನು ಮತ್ತೆ ನೆನಪಿಸುವಂತೆ ಮಾಡಿದ್ದು, ಕೆ. ನಚಿಕೇತ ಎನ್ನುವ ಹೆಸರು ಈ ಮೂಲಕ ಚಾಲ್ತಿಗೆ ಬಂದಿದೆ. ಅಷ್ಟಕ್ಕೂ ಈ ನಚಿಕೇತ ಯಾರು..? ಇಂದಿನ ಘಟನೆಗೂ ಕಾರ್ಗಿಲ್ ಯುದ್ಧಕ್ಕೂ ಏನು ಸಾಮ್ಯತೆ ಅನ್ನುವ ರೋಚಕ ಮಾಹಿತಿ ಇಲ್ಲಿದೆ...
ಅದು 1999ರ ಕಾರ್ಗಿಲ್ ಯುದ್ಧ.. 26 ವರ್ಷದ ಫ್ಲೈಟ್ ಲೆಫ್ಟಿನೆಂಟ್ ಕೆ.ನಚಿಕೇತ ಮಿಗ್-27 ವಿಮಾನವನ್ನು ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಗುರಿಯಾಗಿಸಿ ಹಾರಿಸಿದ್ದರು. ಆದರೆ ನಚಿಕೇತ ಅವರ ಗುರಿ ಸ್ವಲ್ಪದರಲ್ಲೇ ಮಿಸ್ ಆಗಿತ್ತು. ತಾಂತ್ರಿಕ ಕಾರಣದಿಂದ ನಚಿಕೇತ ಅವರಿಗೆ ವಿಮಾನದಿಂದ ಪ್ಯಾರಾಚೂಟ್ ಮೂಲಕ ಹಾರಲಾಗಲಿಲ್ಲ. ಪಾರಾಗಲು ಯಾವುದೇ ಅವಕಾಶವಿಲ್ಲದೇ ನಚಿಕೇತ ಪಾಕ್ ಆರ್ಮಿಗೆ ಶರಣಾಗಿದ್ದರು. ಮೇ.27, 1999ರಂದು ನಚಿಕೇತ ಪಾಕಿಸ್ತಾನದ ವಶವಾಗಿದ್ದರು.
ಆ ವೇಳೆ ಪಾಕಿಸ್ತಾನದಲ್ಲಿ ಭಾರತದ ಹೈಕಮಿಷನರ್ ಆಗಿದ್ದವರು ಜಿ.ಪಾರ್ಥಸಾರಥಿ. ನಚಿಕೇತ ಅವರ ಬಂಧನದಿಂದ ಬಿಡುಗಡೆಯವರೆಗೂ ಇವರೇ ಸಾಕಷ್ಟು ಬೆವರು ಹರಿಸಿದ್ದರು. ನಚಿಕೇತರನ್ನು ಬಂಧಿಸಿದ ಪಾಕ್ ಆರ್ಮಿ ನೇರವಾಗಿ ರಾವಲ್ಪಿಂಡಿಯ ಜೈಲಿಗೆ ಹಾಕಿತ್ತು. ಅಲ್ಲಿ ನಚಿಕೇತ ಅವರಿಗೆ ಮಾರಣಾಂತಿಕವಾಗಿ ಶಿಕ್ಷೆಯನ್ನು ನೀಡಿ ತನ್ನ ನರಿಬುದ್ಧಿ ತೋರಿಸಿತ್ತು. ಸತತ ಮೂರು-ನಾಲ್ಕು ದಿನಗಳ ಕಾಲ ನಚಿಕೇತ ಅವರಿಗೆ ಪಾಕಿಸ್ತಾನ ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸಿತ್ತು.
ಈ ನಡುವೆ ನಚಿಕೇತ ಅವರನ್ನು ಮರಳಿ ತವರಿಗೆ ಕರೆತರುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತಾದರೂ, ಪಾಕಿಸ್ತಾನದ ನರಿ ಬುದ್ಧಿಯಿಂದಾಗಿ ಅದು ಸಫಲವಾಗಿರಲಿಲ್ಲ. ನಚಿಕೇತ ಅವರಿಗೆ ಮತ್ತೆ ತಾಯ್ನಾಡಿಗೆ ಬರುವ ಆಸೆ ಕಮರಿ ಹೋಗಿತ್ತು. ಸಾವು ನಿಶ್ಚಿತ ಎನ್ನುವ ಮನಸ್ಥಿತಿಗೆ ನಚಿಕೇತ ಬಂದಿದ್ದರು. ಇದೇ ವೇಳೆಗೆ ಭಾರತ ರಾಜತಾಂತ್ರಿಕವಾಗಿ ಸಾಕಷ್ಟು ಒತ್ತಡವನ್ನು ತರಲು ಆರಂಭಿಸಿತ್ತು.
ಅಂತಿಮವಾಗಿ ಭಾರತದ ಒತ್ತಡ ಫಲಿಸಿತ್ತು. ವಿಶ್ವಸಂಸ್ಥೆ ಸಹ ನಚಿಕೇತ ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಬಂಧನದ ಎಂಟು ದಿನಗಳ ಬಳಿಕ ಅಂದರೆ ಜೂನ್ 3,1999ರಂದು ನಚಿಕೇತರನ್ನು ಪಾಕ್ ಬಿಡುಗಡೆ ಮಾಡಿತ್ತು. ನಚಿಕೇತರನ್ನು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಗೆ ಹಸ್ತಾಂತರ ಮಾಡಿ ನಂತರದಲ್ಲಿ ವಾಘಾ ಗಡಿ ಮೂಲಕ ಭಾರತಕ್ಕೆ ಹಿಂತಿರುಗಿದ್ದರು.
ನಂತರ ಮೂರು ವರ್ಷ ನಚಿಕೇತರವರಿಗೆ ಗ್ರೌಂಡ್ ಡ್ಯೂಟಿ ನೀಡಲಾಯಿತು. ಆ ಬಳಿಕ ಮತ್ತದೇ ಯುದ್ಧ ವಿಮಾನದ ಪೈಲಟ್ ಆಗಿ ಕರ್ತವ್ಯಕ್ಕೆ ನಚಿಕೇತರನ್ನು ಕರೆಸಿಕೊಳ್ಳಲಾಯಿತು. ನಚಿಕೇತರವರ ವೀರ ಹೋರಾಟಕ್ಕೆ 2000ದಂದು ವಾಯುಸೇನಾ ಪದಕ ನೀಡಿ ಗೌರವಿಸಲಾಯಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos