ಅಮರಾವತಿ: ರಾಜ್ಯದ ಹಿತಾಸಕ್ತಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಹಂ ತೃಪ್ತಿಪಡಿಸಲು ತಲೆ ಬಾಗಿದ್ದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆಂಧ್ರಪ್ರದೇಶದ ಅಭಿವೃದ್ಧಿ ಹಾಗೂ ಹಿತಾಸಕ್ತಿಗಾಗಿ ಮೋದಿಯವರು ಅಹಂ ತೃಪ್ತಿಪಡಿಸಲು ತಲೆ ಬಾಗಿದ್ದೆ. ಕಳೆದ ನಾಲ್ಕೂವರೆ ವರ್ಷಗಳಿಂದ ನಮ್ಮ ಸರ್ಕಾರ ಒಂದಾದ ಬಳಿಕ ಒಂದರಂತೆ ರಾಜ್ಯದ ಪ್ರಗತಿಗಾಗಿ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಹೇಳಿದ್ದಾರೆ.
ನಾಲ್ಕು ವರ್ಷಗಳಿಂದ ಕೇಂದ್ರ ರಾಜ್ಯಕ್ಕೆ ಯಾವುದೇ ರೀತಿಯ ಸಹಕಾರವನ್ನೂ ನೀಡಿಲ್ಲ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಸಂಸತ್ತಿನಲ್ಲಿ ಭರವಸೆ ನೀಡಲಾಗಿತ್ತು. ಆದರೆ, ಈಗಲೂ ಆ ಭರವಸೆ ಪೂರೈಸಿಲ್ಲ ಎಂದು ತಿಳಿಸಿದ್ದಾರೆ.
ಈ ನಡುವೆ ನಾಲ್ಕು ವರ್ಷಗಳಲ್ಲಿ ಸರ್ಕಾರದ ವಿತ್ತ ಹಾಗೂ ಆರ್ಥಿಕ ಬೆಳವಣಿಗೆ ಕುರಿತಂತೆ ಚಂದ್ರಬಾಬು ನಾಯ್ಡು ಅವರು ಶ್ವೇತಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಇದು ಸರ್ಕಾರ 10ನೇ ಹಾಗೂ ಕಡೆಯ ಶ್ವೇತಪತ್ರವಾಗಿದೆ ಎಂದು ತಿಳಿಸಿದ್ದಾರೆ.
ನಾಳೆಯಿಂದ ಜನ್ಮಭೂಮಿ-ಮಾ ವೂರು ಕಾರ್ಯಕ್ರಮ ಆರಂಭವಾಗಲಿದ್ದು, ಜನರಿಗೆ ಇದರ ಬಗ್ಗೆ ಮಾಹಿತಿ ನೀಡಲಾಗುತ್ತದೆ. ರಾಜ್ಯ ವಿಭಜನೆಗೊಳ್ಳುವಾಗ ಬರುತ್ತಿದ್ದ ಆದಾಯ ಶೇ.46 ಇತ್ತು. ಶೇ.56ರಷ್ಟು ಜನಸಂಖ್ಯೆಯಿತ್ತು. ವಿಭಜನೆಗೊಂಡ ಬಳಿಕ ಜನಸಂಖ್ಯೆ ಆಧಾರದ ಮೇಲೆ ಆದಾಯಗಳು ಇಬ್ಬಾಗಗೊಂಡಿತು. ಇದರಿಂದ ಆಂಧ್ರಪ್ರದೇಶಕ್ಕೆ ದೊಡ್ಡ ನಷ್ಟವೇ ಸಂಭವಿಸಿತು ಎಂದಿದ್ದಾರೆ.