ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ವಿವಾದ ಕುರಿತು ಬುಧವಾರ ಲೋಕಸಭೆಯಲ್ಲಿ ಕೋಲಾಹಲ ನಡೆದಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧೈರ್ಯವಿಲ್ಲ. ತಮ್ಮ ರೂಮ್ ನಲ್ಲಿ ಬಚ್ಚಿಟ್ಟುಕೊಂಡಿದ್ದಾರೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಹೇಳಿದ್ದಾರೆ.
ಕಲಾಪದ ವೇಳೆ ಮಾತನಾಡಿರುವ ರಾಹುಲ್ ಅವರು, ರಫೇಲ್ ವಿಚಾರ ಸಂಬಂಧ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಧಾನಿ ಮೋದಿಯವರು ಹೇಳುತ್ತಾರೆ, ನನ್ನನ್ನು ಯಾರು ಪ್ರಶ್ನೆ ಮಾಡಿಲ್ಲ. ನನ್ನ ಮೇಲೆ ಆರೋಪವಿಲ್ಲ ಎಂದು. ಆದರೆ, ಇಡೀ ದೇಶವೇ ಪ್ರಧಾನಮಂತ್ರಿಗಳ ಬಳಿ ಉತ್ತರವನ್ನು ಬಯಸುತ್ತಿದೆ ಎಂದು ಹೇಳಿದ್ದಾರೆ.
ಮೊದಲನೆಯ ಸ್ತಂಭ ಖರೀದಿ ಪ್ರಕ್ರಿಯೆ, ಎರಡನೆಯದು ಬೆಲೆ ನಿಗದಿ, ಮೂರನೆಯದು ಆಸಕ್ತಿ ದಾಯಕವಾಗಿದ್ದು, ಪ್ರೋತ್ಸಾಹ. ದೀರ್ಘಾವಧಿ ಸಮಾಲೋಚನೆ ನಡೆದ ಬಳಿಕ ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳನ್ನು ರಫೇಲ್'ನ್ನು ಆಯ್ಕೆ ಮಾಡಿದರು. ವಾಯುಪಡೆಗೆ 126 ವಿಮಾನಗಳು ಬೇಕಿತ್ತು. ಬೇಡಿಕೆಯನ್ನು 26ಕ್ಕೆ ಬದಲಾಯಿಸಿದ್ದಾದರೂ ಏಕೆ ಎಂದು ಪ್ರಶ್ನಿಸಿದ್ದಾರೆ.
ಕಳೆದ ಬಾರಿ ಪ್ರಧಾನಿ ಮೋದಿಯವರು ನನ್ನ ಭಾಷಣದ ಬಳಿಕ ಉದ್ದನೆಯ ಭಾಷಣ ಮಾಡಿದ್ದರು. ಆದರೆ, ರಫೇಲ್ ವಿವಾದ ಕುರಿತು 5 ನಿಮಿಷ ಕೂಡ ಮಾತನಾಡಿರಲಿಲ್ಲ. ಅವರಿಗೆ ಸಂಸತ್ತಿನಲ್ಲಿ ನಮ್ಮನ್ನು ಎದುರಿಸುವ ಧೈರ್ಯೇ ಇಲ್ಲ. ರಕ್ಷಣಾ ಸಚಿವರು ಎಐಎಡಿಎಂಕೆ ಸಂಸದರ ಹಿಂದೆ ಅಡಗಿ ಕುಳಿತುಕೊಳ್ಳುತ್ತಾರೆ. ಪ್ರಧಾನಿ ಮೋದಿಯವರು ರಕ್ಷಣಾ ಸಚಿವರ ಕೊಠಡಿಯಲ್ಲಿ ಮಾಹಿತಿಗಳನ್ನು ಬಚ್ಚಿಟ್ಟಿದ್ದಾರೆಂದು ಗುಡುಗಿದರು.
ಇದೇ ವೇಳೆ ಸಂಸತ್ತಿನಲ್ಲಿ ರಾಹುಲ್ ಅವರು ಅನಿಲ್ ಅಂಬಾನಿಯವರ ಹೆಸರನ್ನು ಪ್ರಸ್ತಾಪ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್, ಅವರ ಹೆಸರನ್ನು ಪದೇ ಪದೇ ಬಳಸಬೇಡಿ. ಅವರು ಸಂಸತ್ತಿನ ಅಭ್ಯರ್ಥಿಯಲ್ಲ ಎಂದರು. ಈ ವೇಳೆ ಮಾತನಾಡಿದ ರಾಹುಲ್, ರಫೇಲ್ ಒಪ್ಪಂದವನ್ನು ಹೆಚ್ಎಎಲ್ ನಿಂದ ಕಸಿದುಕೊಂಡು ಅನಿಲ್ ಅಂಬಾನಿಗೆ ನೀಡಿದ್ದೇಕೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ವಿತ್ತ ಸಚಿವ ಅರುಣ್ ಜೇಟ್ಲಿಯವರು, ರಾಹುಲ್ ಮೊದಲ ಪದದಿಂದ ಇಲ್ಲಿಯವರೆಗೂ ಹೇಳಿದ್ದು ಶುದ್ಧ ಸುಳ್ಳು. ಅವರ ಮಾತಿನಲ್ಲಿ ಯಾವುದೇ ಹುರುಳಿಲ್ಲ. ನಾನು ಒಬ್ಬ ದೊಡ್ಡ ರಾಜಕಾರಣಿ ಎಂದು ತೋರಿಸಿಕೊಳ್ಳಲು ಈ ರೀತಿ ಸುಳ್ಳು ಹೇಳುತ್ತಿದ್ದಾರೆ. ಇದೇ ರೀತಿ ನಮ್ಮ ಕಡೆ ಸಾಕ್ಷಿ ಇದೆ. ಆಡಿಯೋ ಟೇಪ್ ಇದೆ. ದಾಖಲೆಗಳಿವೆ ಎಂದು ಸುಪ್ರೀಂಕೋರ್ಟ್ ಮುಂದೆನೂ ಸುಳ್ಳು ಹೇಳಿದ್ದರು ಎಂದು ತಿರುಗೇಟು ನೀಡಿದರು. ಇದೇ ವೇಳೆ ಅಗಸ್ಟಾ ವೆಸ್ಟ್ ಲ್ಯಾಂಡ್ ಸೇರಿದಂತೆ ಅನೇಕ ಹಗರಣಗಳ ಕುರಿತು ಮಾತನಾಡಿದರು.
ಆರೋಪ ಮಾಡುತ್ತಿರುವ ರಾಹುಲ್ ಗಾಂಧಿಯವರಿಗೆ ಆಡಿಯೋ ಕ್ಲಿಪ್ ಮಾಡಲು ನಿಂತು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಡಿಯೋ ಕ್ಲಿಪ್ ಕುರಿತ ದೃಢೀಕರಣದ ಬಗ್ಗೆ ರಾಹುಲ್ ಅವರಿಗೇ ಸಂಶಯವಿದೆ. ಏಕೆಂದರೆ ಆಡಿಯೋ ಕ್ಲಿಪ್'ನ್ನು ತಮ್ಮ ಪಕ್ಷದವರೇ ಸೃಷ್ಟಿಸಿರುವುದರಿಂದ ರಾಹುಲ್ ಅವರಿಗೆ ಭಯವಿದೆ. ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಆಡಿಯೋ ಕ್ಲಿಪ್'ಗೆ ಪ್ಲೇ ಮಾಡಲು ಬಿಡಬಾರದು. ಯಾವುದೇ ಆಧಾರಗಳನ್ನು ಪ್ರದರ್ಶಿಸುವ ವೇಳೆ ಅವುಗಳಿಗೆ ಕೆಲ ಪ್ರಕ್ರಿಯೆಗಳಿವೆ. ಆಡಿಯೋ ಕ್ಲಿಪ್ ಪ್ರಾಮಾಣೀಕೃತವಾಗಿರಬೇಕು. ಕೆಲವರು ಸತ್ಯವನ್ನು ಇಷ್ಟ ಪಡುವುದಿಲ್ಲ. ರಾಹುಲ್ ದನಿಯೆತ್ತಿರುವುದರ ಸಂಬಂಧ ಇಡೀ ದೇಶ ಅಸಮಾಧಾನಗೊಂಡಿದೆ. ದೊಡ್ಡ ದೊಡ್ಡ ವ್ಯಕ್ತಿಗಳಿಂದ ತಲೆಎತ್ತಿ ನಿಂತಿದ್ದ ಕಾಂಗ್ರೆಸ್'ನ್ನು ಇದೀಗ ವಿಮಾನಗಳ ಬಗ್ಗೆ ಜ್ಞಾನವೇ ಇಲ್ಲದ ವ್ಯಕ್ತಿಯೊಬ್ಬರು ಮುನ್ನಡೆಸುವಂತಾಗಿದೆ. ಕಾಂಗ್ರೆಸ್ ಕೇವಲ ಹಣವಷ್ಟೇ ಅರ್ಥಾಗುತ್ತದೆ. ದೇಶದ ಭದ್ರತೆ ವಿಚಾರ ಅರ್ಥವಾಗುವುದಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos