ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನ ಆರಂಭಗೊಂಡ ದಿನದಿಂದಲೂ ಮೇಕೆದಾಟು ಅಣೆಕಟ್ಟು ಯೋಜನೆಗೆ ವಿರೋಧ ವ್ಯಕ್ತಪಡಿಸಿ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಎಐಎಡಿಎಂಕೆಯ ಏಳು ಸಂಸದರು ಸೇರಿದಂತೆ ಗುರುವಾರ ಮತ್ತೆ 21 ಸಂಸದರನ್ನು ನಾಲ್ಕು ದಿನಗಳವರೆಗೆ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ.
ಸಭ್ಯತೆಯ ನಿಯಮ ಮೀರಿ ಸದನದಲ್ಲಿ ಗದ್ದಲ ನಡೆಸಿದ್ದರಿಂದ ಶಿಸ್ತು ಕ್ರಮದ ಭಾಗವಾಗಿ ಸ್ಪೀಕರ್ ಸುಮಿತ್ರಾ ಮಹಾಜನ್, ಮುಂದಿನ 4 ದಿನದ ಕಲಾಪಗಳಿಂದ ಇಂದು ಮತ್ತೆ ಡಿಟಿಪಿಯ 13 ಹಾಗೂ ಎಐಎಡಿಎಂಕೆಯ ಏಳು ಸಂಸದರು ಸೇರಿದಂತೆ 21 ಸಂಸದರನ್ನು ಅಮಾನತುಗೊಳಿಸಿದ್ದಾರೆ.
ನಿನ್ನೆಯಷ್ಟೇ ಮೇಕೆದಾಟು ಅಣೆಕಟ್ಟು ವಿಚಾರ ಮುಂದಿಟ್ಟುಕೊಂಡು ಗದ್ದಲ ನಡೆಸುತ್ತಿದ್ದ ಎಐಎಡಿಎಂಕೆಯ 24 ಸಂಸದರನ್ನು ಸ್ಪೀಕರ್ ಅಮಾನತುಗೊಳಿಸಿದ್ದರು.
ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಎಐಎಡಿಎಂಕೆ ಸಂಸದರು ಮತ್ತೆ ಮೇಕೆದಾಟು ಬ್ಯಾನರ್ ಹಿಡಿದು ಹಾಗೂ ಟಿಡಿಪಿ ಸಂಸದರು ವಿಶೇಷ ಸ್ಥಾನಮಾನಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ದಾಖಲೆ ಪತ್ರಗಳನ್ನು ಹರಿದು ಲೋಕಸಭೆ ಸಚಿವಾಲಯದ ಅಧಿಕಾರಿಗಳು ಕುಳಿತಿದ್ದ ಸ್ಥಳದತ್ತ ತೂರಿ ಆಕ್ರೋಶ ವ್ಯಕ್ತಪಡಿಸಿದರು. ಈ ವರ್ತನೆಯಿಂದ ಬೇಸತ್ತ ಸ್ಪೀಕರ್ ಪ್ರತಿಭಟನಾ ನಿರತ ಸಂಸದರನ್ನು 4 ದಿನಗಳ ಮಟ್ಟಿಗೆ ಅಮಾನತುಗೊಳಿಸಿ, ಕಲಾಪವನ್ನು ನಾಳೆಗೆ ಮುಂದೂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos