ನವದೆಹಲಿ: ನ್ಯಾಯಾಲಯದಲ್ಲಿರುವ ರಾಮ ಮಂದಿರ ಪ್ರಕರಣಲ್ಲಿ ಕಾಂಗ್ರೆಸ್ ಅಡ್ಡಿ ಉಂಟುಮಾಡುತ್ತಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.
ಕೋರ್ಟ್ ನಲ್ಲಿ ರಾಮ ಮಂದಿರ ಪ್ರಕರಣವಿದ್ದು, ಕಾಂಗ್ರೆಸ್ ಪಕ್ಷ ತನ್ನ ವಕೀಲರ ಮೂಲಕ ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿ ಉಂಟುಮಾಡುತ್ತಿದೆ, ಈ ಬಗ್ಗೆ ರಾಮಭಕ್ತರು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಬೇಕು ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
ರಾಮ ಮಂದಿರ ದೇಶದ ಜನತೆಯ ನಂಬಿಕೆಯ ಪ್ರತೀಕ, ಆದರೆ ಕಾಂಗ್ರೆಸ್ ಪಕ್ಷ ಕೋರ್ಟ್ ನಲ್ಲಿ ವಕೀಲರ ಮೂಲಕ ಅಡ್ಡಿ ಉಂಟು ಮಾಡುತ್ತಿದ್ದು ರಾಜಕಾರಣ ಮಾಡುತ್ತಿದೆ, "ಜನಿವಾರ ಕೇವಲ ಮೂರು ರಾಜ್ಯಗಳ ಚುನಾವಣೆಗೆ ಮಾತ್ರ ಸೀಮಿತವೇ" ಎಂದು ರಾಹುಲ್ ಗಾಂಧಿ ಅವರನ್ನು ರಾಮ ಭಕ್ತರು ಪ್ರಶ್ನಿಸಬೇಕೆಂದು ಸ್ಮೃತಿ ಇರಾನಿ ಸಲಹೆ ನೀಡಿದ್ದಾರೆ.
ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ್ದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, 2019 ರ ಲೋಕಸಭಾ ಚುನಾವಣೆ ನಂತರ ಪ್ರಕರಣದ ವಿಚಾರಣೆ ನಡೆಸಬೇಕೆಂದು ಮನವಿ ಮಾಡಿದ್ದರು. ಸ್ಮೃತಿ ಇರಾನಿ, ತಮ್ಮ ಹೇಳಿಕೆಯಲ್ಲಿ ಸ್ಪಷ್ಟವಾಗಿ ಕಪಿಲ್ ಸಿಬಲ್ ಅವರ ಬಗ್ಗೆ ಉಲ್ಲೇಖಿಸಿದ್ದು, ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದಾರೆ.