ಕೃಷ್ಣಗಿರಿ: ಕರ್ನಾಟಕ ಮತ್ತು ತಮಿಳುನಾಡು ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಕಾಡಂಚಿನ ಗ್ರಾಮಗಳಿಗೆ ನುಗ್ಗಿದ್ದ ಆನೆಗಳನ್ನು ಓಡಿಸಲು ಆಗಮಿಸಿದ್ದ ಅರಣ್ಯಾಧಿಕಾರಿಯನ್ನೇ ಕಾಡಾನೆಗಳು ಅಟ್ಟಾಡಿಸಿ ಭೀಕರವಾಗಿ ಕೊಂದು ಹಾಕಿವೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಮೂಲಗಳ ಪ್ರಕಾರ ಕರ್ನಾಟಕ-ತಮಿಳುನಾಡು ಗಡಿ ಭಾಗದ ಕೃಷ್ಣಗಿರಿ ಜಿಲ್ಲೆಯ ಡೆಂಕನಿಕೋಟೆಯ ಶೂಲಗಿರಿಯಲ್ಲಿ ಈ ಘಟನೆ ನಡೆದಿದ್ದು, ಆನೆ ದಾಳಿಗೆ ಸುಮಾರು 48 ವರ್ಷದ ಅರಣ್ಯಾಧಿಕಾರಿ ಮಾರಪ್ಪನ್ ಎಂಬುವವರು ಸಾವನ್ನಪ್ಪಿದ್ದಾರೆ. ನಿನ್ನೆ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಡೆಂಕನಿಕೋಟೆ ಬಳಿಯ ಶೂಲಗಿರಿ ಗ್ರಾಮಕ್ಕೆ ಆನೆಗಳ ಹಿಂಡು ನುಗ್ಗಿದ್ದವು. ವಿಚಾರ ತಿಳಿದ ಕೂಡಲೇ ಅವುಗಳನ್ನು ಮತ್ತೆ ಕಾಡಿಗೆ ಅಟ್ಟಲು ಅರಣ್ಯಾಧಿಕಾರಿಗಳ ತಂಡ ದೌಡಾಯಿಸಿತ್ತು.
ಆದರೆ ಅಷ್ಟು ಹೊತ್ತಿಗಾಗಲೇ ಸ್ಥಳದಲ್ಲಿ ನೂರಾರು ಸ್ಥಳೀಯರ ದಂಡು ನೆರೆದಿತ್ತು. ಇದರಿಂದ ಆನೆಗಳನ್ನು ಓಡಿಸುವ ಕಾರ್ಯಾಚರಣೆಗೆ ತೊಡಕಾಗಿತ್ತು. ಈ ವೇಳೆ ಆನೆಗಳ ಮೇಲೆ ಸ್ಥಳೀಯರು ಕಲ್ಲು ತೂರಾಟ ಮಾಡುತ್ತಿದ್ದರಿಂದ ರೊಚ್ಚಿಗೆದ್ದ ಆನೆ ಅವರ ಮೇಲೆ ದಾಳಿಗೆ ಮುಂದಾಗಿದೆ. ಈ ವೇಳೆ ವ್ಯಕ್ತಿಯೊಬ್ಬರು ಆನೆಯಿಂದ ತಪ್ಪಿಸಿಕೊಳ್ಳಲು ನೀರಿಗೆ ಧುಮುಕಿದ್ದಾರೆ. ನೀರಿನಲ್ಲಿ ಈಜಿ ಮತ್ತೊಂದು ದಡ ಸೇರಿದ್ದ ವ್ಯಕ್ತಿಯನ್ನು ಆನೆ ಹಿಂಬಾಲಿಸಿದೆ. ಆನೆ ಹಿಂದೆ ಬರುತ್ತಿದ್ದಂತೆಯೇ ಸ್ಥಳೀಯರು ಆತನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ ಈಜೀ ಈಜಿ ಸುಸ್ತಾಗಿದ್ದ ಆತ ಓಡಲಾಗದೇ ಅಲ್ಲಿ ಕೆಳಗೆ ಬಿದ್ದಿದ್ದಾನೆ. ಆತ ಕೆಳಗೆ ಬೀಳುತ್ತಿದ್ದಂತೆಯೇ ಹಿಂದಿನಿಂದ ಓಡಿ ಬಂದ ಆನೆ ಆತನ ಮೇಲೆ ದಾಳಿ ಮಾಡಿ ತುಳಿದು ಸೊಂಡಿಲಿನಿಂದ ತಿವಿದು ಕೊಂದು ಹಾಕಿದೆ.
ಬಳಿಕ ಜನರ ಕೂಗಾಟ ಚೀರಾಟ ಮತ್ತು ಕಲ್ಲೇಟಿನಿಂದಾಗಿ ಓಡಿ ಹೋಗಿದೆ. ಈ ಭೀಕರ ದೃಶ್ಯಾವಳಿಯನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆಯ ಛಾಯಾಗ್ರಾಹಕರು ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos