ನವದೆಹಲಿ: ಸಿಬಿಐ ನಿರ್ದೇಶಕರ ಹುದ್ದೆಯಿಂದ ವಜಾಗೊಂಡಿರುವ ಆಲೋಕ್ ವರ್ಮಾ ಅವರಿಗಿಂತಲೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೆಚ್ಚು ಅಳುತ್ತಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಬಿಜೆಪಿ ನಾಯಕ ಜಿವಿಎಲ್ ನರಸಿಂಹ ರಾವ್ ಅವರು "ವರ್ಮಾ ದುರ್ದೆಶೆಗಾಗಿ ರಾಹುಲ್ ಗಾಂಧಿ ಹೆಚ್ಚು ಅಳುತ್ತಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.
ಹಿಂದಿನ ಯುಪಿಎ ಸರ್ಕಾರದಲ್ಲಿ ಕಾಂಗ್ರೆಸ್ ಸಿಬಿಐ ವ್ಯವಹಾರದಲ್ಲಿ ಪದೇಪದೇ ಹಸ್ತಕ್ಷೇಪ ನಡೆಸುತ್ತಿತ್ತು; ಅಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಮತ್ತು ಇತರ ರಕ್ಷಣಾ ಪರಿಕರ ಖರೀದಿ ವ್ಯವಹಾರಗಳಲ್ಲಿ ಸಿಬಿಐ ಯಾವೆಲ್ಲ ಸತ್ಯಾಂಶಗಳನ್ನು ಕಲೆ ಹಾಕುತ್ತಿದೆ ಎಂಬುದನ್ನು ತಿಳಿಯಲು ಕಾಂಗ್ರೆಸ್ ಯತ್ನಿಸುತ್ತಿತ್ತು ಎಂದು ನರಸಿಂಹ ರಾವ್ ಹೇಳಿದ್ದಾರೆ.
ಕಾಂಗ್ರೆಸ್ಗೆ ಸಿಬಿಐ ಬಗ್ಗೆ ಅತೀವವಾದ ಭಯ ಇತ್ತು. ಸಿಬಿಐಗೆ ರಕ್ಷಣಾ 'ಡೀಲ್' (ಭ್ರಷ್ಟಾಚಾರ) ಗಳ ನಿಜಾಂಶಗಳು ದೊರಕುವವೋ ಎಂಬ ಬಗ್ಗೆ ಕಾಂಗ್ರೆಸ್ ಗೆ ಆತಂಕವಿತ್ತು. ಆದುದರಿಂದಲೇ ಅದು ಸಿಬಿಐ ಚರ್ಚೆಯಲ್ಲಿ ಪದೇ ಪದೇ ಹಸ್ತಕ್ಷೇಪ ನಡೆಸಿ ಸಿಬಿಐ ಯಾವೆಲ್ಲ ನಿಜಾಂಶಗಳನ್ನು ಕಲೆ ಹಾಕಿದೆ ಎಂಬುದನ್ನು ಕೆದಕಿ ನೋಡುತ್ತಿತ್ತು ಎಂದು ರಾವ್ ತಿಳಿಸಿದ್ದಾರೆ.