ದೇಶ

ಫೆಬ್ರವರಿ ತಿಂಗಳೊಳಗೆ ಲೋಕಪಾಲಕ್ಕೆ ಹೆಸರುಗಳನ್ನು ಶಿಫಾರಸು ಮಾಡಿ: ಸುಪ್ರೀಂ ಕೋರ್ಟ್

Raghavendra Adiga
ನವದೆಹಲಿ: ದೇಶದ ಪ್ರಥಮ ಲೋಕಪಾಲ್ ನೇಮಕಕ್ಕೆ ಹೆಸರುಗಳನ್ನು ಸೂಚಿಸಲು ಫೆಬ್ರವರಿ ಅಂತ್ಯದವರೆಗೆ ಗಡುವು ನೀಡಿ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ. ಫೆಬ್ರವರಿ ಅಂತ್ಯದೊಳಗೆ ದೇಶದ ಪ್ರಥಮ ಲೋಕಪಾಲರ ಹೆಸರು ಸೂಚಿಸಬೇಕೆಂದು ಕೋರ್ಟ್ ಲೋಕಪಾಲ್ ಶೋಧನಾ ಸಮಿತಿಗೆ ನಿರ್ದೇಶಿಸಿದೆ.
ಸುಪ್ರೀಂ ಕೋರ್ಟ್ ಮಾಜಿ ನ್ಯಾಧೀಶ ರಂಜನ್ ಪ್ರಕಾಶ್ ದೇಸಾಯಿ ಶೋಧನಾ ಸಮಿತಿಯ ನೇತೃತ್ವ ವಹಿಸಿದ್ದಾರೆ.
ಶೋಧನಾ ಸಮಿತಿಗೆ ಅಗತ್ಯ ಕೆಲಸ ಕಾರ್ಯಗಳನ್ನು ಮುಗಿಸುವುದಕ್ಕೆ ಅವಶ್ಯಕ ಮೂಲಭೂತ ಸೌಕರ್ಯ ಹಾಗೂ ಮಾನವ ಸಂಪನ್ಮೂಲಗಳನ್ನು ಕೇಂದ್ರ ಸರ್ಕಾರ ಒದಗಿಸಬೇಕೆಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಎಲ್ ಎನ್ ರಾವ್ ಮತ್ತು ಎಸ್.ಕೆ. ಕೌಲ್ ಅವರನ್ನೂ ಒಳಗೊಂಡ ನ್ಯಾಯಪೀಠ ಮಾರ್ಚ್ 7ರಂದು ಮುಂದಿನ ವಿಚಾರಣೆ ನಿಗದಿಪಡಿಸಿ ಆದೇಶ ನೀಡಿದೆ.
ಕೇಂದ್ರ ಸರಕಾರದ ಪರವಾಗಿ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ನ್ಯಾಯಾಲಯದಲ್ಲಿ ಹಾಜರಿದ್ದರು. ಶೋಧನಾ ಸಮಿತಿಗೆ ಮೂಲ ಸೌಕರ್ಯ, ಮಾನವ ಸಂಪನ್ಮೂಲಗಳ ಕೊರತೆ ಇದೆ  ಇದರ ಕಾರಣ ಸಮಯಕ್ಕೆ ಸರಿಯಾಗಿ ಸಭೆ, ಚರ್ಚೆ ನಡೆಸುವುದು ಅಸಾಧ್ಯವಾಗಿದೆ ಎಂದು ಅವರು ವಾದಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ನ್ಯಾಯಾಲಯ ಶೋಧನಾ ಸಮಿತಿಯ ಅಗತ್ಯಗಳನ್ನು ಪೂರೈಸಲು ಕೇಂದ್ರ ಸರ್ಕಾರಕ್ಕೆ ಸೂಚನೆ ನಿಡಿದೆ.
SCROLL FOR NEXT