ದೇಶ

ಹುತಾತ್ಮ ಲ್ಯಾನ್ಸ್ ನಾಯಕ್ ನಝೀರ್ ವಾನಿಗೆ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ

Raghavendra Adiga
ನವದೆಹಲಿ: ಕಳೆದ ವರ್ಷ ನವೆಂಬರ್ ನಲ್ಲಿ ಜಮ್ಮು ಮತ್ತು ಕಾಶ್ಮೀರದ ಶೋಫಿಯಾನ್ ಪ್ರದೇಶದ ಬತಗುಂದ್ ಗ್ರಾಮದಲ್ಲಿ ನಡೆದ ಭಯೋತ್ಪಾದಕ ವಿರೋಧಿ ಹೋರಾಟದ ವೇಳೆ ಹುತಾತ್ಮನಾಗಿದ್ದ ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್ ವಾನಿ ಅವರಿಗೆ ಶಾಂತಿ ಸಮಯದಲ್ಲಿ ಭಾರತ ಸರ್ಕಾರ ನಿಡುವ ಅತ್ಯುನ್ನತ ಪ್ರಶಸ್ತಿ ಅಶೋಕ ಚಕ್ರ ಪುರಸ್ಕಾರ ಸಂದಿದೆ.
ಲ್ಯಾನ್ಸ್ ನಾಯಕ್  ನಝೀರ್ ಅಹ್ಮದ್ ವಾನಿ  ಅತ್ಯಂತ ಭೀಕರವಾದ ಭಯೋತ್ಪಾದಕರನ್ನು ಎದುರಿಸಿದ್ದರು. ಅವರು ಗಾಯಾಳುಗಳಾಗಿದ್ದ ತಮ್ಮ ಸಹೋದ್ಯೋಗಿ ಸೈನಿಕರನ್ನು ಉಳಿಸಲು ಶ್ರಮವಹಿಸಿದ್ದರು. ಈ ಮೂಲಕ ತಮ್ಮ ಪ್ರಾಣವನ್ನೇ ಸಮರ್ಪಿಸಿ  ಭಾರತೀಯ ಸೇನೆಯಲ್ಲಿದ್ದು ಅತ್ಯುನ್ನತ  ತ್ಯಾಗಮಾಡಿದ್ದಾರೆ ಎಂದು ರಾಷ್ಟ್ರಪತಿ ಭವನದ ಅಧಿಸೂಚನೆಯಲ್ಲಿ ವಿವರಿಸಿದೆ.
ಈ ಹಿಂದೆ ಉಗ್ರಗಾಮಿಯಾಗಿದ್ದ ಅಹ್ಮದ್ ವಾನಿ ತಾನು ಶರಣಾದ ಬಳಿಕ ಸೈನ್ಯಕ್ಕೆ ಸೇರಿ ಎರಡು ಬಾರಿ ಸೇನಾ ಪದಕ ವಿಜೇತರಾಗಿದ್ದರು.
ನವೆಂಬರ್ ನಲ್ಲಿ ನಡೆದ ಭಯೋತ್ಪಾದಕರ ವಿರುದ್ಧದ ಹೋರಾಟವು ವಾನಿ ಅವರ ಪ್ರಾಣವನ್ನೇ ಬಲಿ ಪಡೆದಿತ್ತು. ರ್ಯಾಚರಣೆಯಲ್ಲಿ ಅವರು 34 ರಾಷ್ಟ್ರೀಯ ರೈಫಲ್ಸ್ ದಳದೊಡನೆ ಇದ್ದರು.ಇವರಿಗೆ 21ಗನ್ ಸಲ್ಯೂಟ್ ನೀಡಲಾಯಿತು ಮತ್ತು ನೂರಾರು ಹಳ್ಳಿಗರು ಅವರ ಅಂತ್ಯಕ್ರಿಯೆಯಲ್ಲಿ ಭಾಗಿಗಳಾಗಿ ಅವರಿಗೆ ಅಂತಿಮ ಗೌರವ ಸಲ್ಲಿಸಿದ್ದರು.
ಕುಲ್ಗಮ್ ನ ಚೆಕಿ ಅಶ್ಮುಜೀ ಗ್ರಾಮದ ನಿವಾಸಿಯಾಗಿದ್ದ ವಾನಿ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.
ಇನ್ನುಳಿದಂತೆ ನಾಲ್ಕು ಅಧಿಕಾರಿಗಳು ಮತ್ತು ಸೈನಿಕರಿಗೆ ಕೀರ್ತಿ ಚಕ್ರ, 2 ಮಂದಿಗೆ ಶೌರ್ಯ ಚಕ್ರವನ್ನು ಪುರಸ್ಕಾರ ಘೋಷಣೆಯಾಗಿದೆ..
SCROLL FOR NEXT