ಧ್ವಜಾರೋಹಣ ಮಾಡಿದ ರಾಷ್ಟ್ರಪತಿ ಕೋವಿಂದ್
ನವದೆಹಲಿ: 70ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಿಮಿತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧ್ವಜಾರೋಹಣ ನೆರವೇರಿಸಿದರು.
ದೆಹಲಿಯಲ್ಲಿ ಇಂದು 70ನೇ ಗಣರಾಜ್ಯೋತ್ಸವದ ಸಂಭ್ರಮಾಚರಣೆ ನಡೆಯುತ್ತಿದ್ದು, ದಟ್ಟ ಮಂಜು ಕವಿದ ವಾತಾವರಣವಿದ್ದರಿಂದ ದ್ವಜಾರೋಹಣವನ್ನು ಬೆಳಗ್ಗೆ 10 ಗಂಟೆಗೆ ನೆರವೇರಿಸಲಾಯಿತು.ದೆಹಲಿಯ ರಾಜಪಥ್ನಲ್ಲಿ ಗಣರಾಜ್ಯೋತ್ಸವ ಪರೇಡ್ ಆರಂಭವಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಅಸ್ಸಾಂ ರೈಫಲ್ಸ್ನ ಆಲ್ ವುಮೆನ್ ಕಾಂಟಿಂಜೆಂಟ್ ರಾಜಪಥ್ನಲ್ಲಿ ಪಥಸಂಚಲನ ಮಾಡುತ್ತಿವೆ.
ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, 'ಭಾರತದ ಬಹುಸಾಂಸ್ಕೃತಿಕತೆಯೇ ದೇಶದ ಶಕ್ತಿ. ವೈವಿಧ್ಯತೆ, ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಯ ಮೇಲೆ ಭಾರತದ ಮಾಡೆಲ್ ನಿಂತಿದೆ ಎಂದರು. ಇದೇ ವೇಳೆ ಕೋವಿಂದ್, ಮೇಲ್ವರ್ಗ ಮೀಸಲಾತಿಗೆ ಬೆಂಬಲ ಸೂಚಿಸಿದ್ರು. ಇದು ಮಹಾತ್ಮಾ ಗಾಂಧಿ ಕನಸಿನ ಭಾರತದತ್ತ ಮತ್ತೊಂದು ಹೆಜ್ಜೆ ಎಂದು ಹೇಳಿದರು.
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅಮರ್ ಜವಾನ್ ಜ್ಯೋತಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕ ಚಾಲನೆ ನೀಡಿದರು. ಬಳಿಕ ರಾಜಪಥಕ್ಕೆ ಆಗಮಿಸಿದ ಪ್ರಧಾನಿ ಮೋದಿ ಗಣರಾಜ್ಯೋತ್ಸವ ಕಾರ್ಯಕ್ರಮದ ಅತಿಥಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರನ್ನು ಸ್ವಾಗತಿಸಿದರು.
ಇದೇ ವೇಳೆ ಹುತಾತ್ಮ ಯೋಧ ಲ್ಯಾನ್ಸ್ ನಾಯಕ್ ನಾಜಿರ್ ಅಹ್ಮದ್ ವಾನಿ ಅವರಿಗೆ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ನೀಡಿದರು. ವಾನಿ ಅವರ ಪತ್ನಿ ಮಹಾಜಬೀನ್ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos