'ಉರಿ' ಚಿತ್ರ ವೀಕ್ಷಿಸಿದ ಉಪರಾಷ್ಟ್ರಪತಿ
ನವದೆಹಲಿ: ಬಾಲಿವುಡ್ ನಲ್ಲಿ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ವಿಶಿಷ್ಟ ದಾಖಲೆಗಳನ್ನು ಬರೆಯುತ್ತಾ ಮುಂದೆ ಸಾಗಿದೆ.. ವಿಕ್ಕಿ ಕೌಶಲ್ ಹಾಗೂ ಯಾಮಿ ಗೌತಮ್ ಅಭಿನಯ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿರುವುದಷ್ತೇ ಅಲ್ಲದೆ ಗಣ್ಯಾತಿಗಣ್ಯರಿಂದ ಮೆಚ್ಚುಗೆಗೆ ಸಹ ಪಾತ್ರವಾಗಿದೆ. ಇತ್ತೀಚಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರು ಸೆಂಟ್ರಲ್ ಮಾಲ್ ನಲ್ಲಿ "ಉರಿ" ಚಿತ್ರ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದರು. ಈಗ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಿತ್ರ ವೀಕ್ಷಣೆ ಮಾಡಿದ್ದು ಟ್ವಿಟ್ಟರ್ ಮೂಲಕ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಮಂಗಳವಾರ ಸಂಜೆ ಉಪರಾಷ್ಟ್ರಪತಿ ಹಾಗೂ ಐಟಿಬಿಪಿ ಸಿಬ್ಬಂದಿಗಳಿಗಾಗಿ "ಉರಿ" ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಚಿತ್ರ ವೀಕ್ಷಣೆ ಮಾಡಿರುವ ವೆಂಕಯ್ಯ ನಾಯ್ಡು ಚಿತ್ರದ ಬಗೆಗೆ ಮೆಚ್ಚುಗೆ ಸೂಚಿಸಿದ್ದು ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಉಪರಾಷ್ಟ್ರಪತಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ನಾಯ್ಡು " 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಒಂದು ಸ್ಪೂರ್ತಿದಾಯಕ ಚಿತ್ರವಾಗಿದೆ. ನವದೆಹಲಿಯ ಉಪರಾಷ್ಟ್ರಪತಿ ನಿವಾಸದಲ್ಲಿ ಐಟಿಬಿಪಿ ಸಿಬ್ಬಂದಿಯೊಂದಿಗೆ ಈ ಚಿತ್ರವನ್ನು ವೀಕ್ಷಿಸಿದ್ದೇನೆ. ಅವರು ಸಹ ಚಿತ್ರದಿಂದ ಸ್ಪೂರ್ತಿಗೊಂಡಿರಬಹುದು. "ಉರಿ" ಚಿತ್ರ ನಟರು ಹಾಗೂ ಇಡೀ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ" ಎಂದಿದ್ದಾರೆ.
ಈ ಮಧ್ಯೆ "ಉರಿ" ಚಿತ್ರ 200 ಕೋಟಿ ಕ್ಲಬ್ ಗೆ ಸೇರ್ಪಡೆಯಾಗಿದ್ದು ಒಂದು ವರದಿಯ ಪ್ರಕಾರ ಈ ಚಿತ್ರ ಇದುವರೆಗೆ ಪ್ರಪಂಚದಾದ್ಯಂತ 223.97 ಕೋಟಿ ರೂ. ಗಳಿಸಿದೆ.ಕಂಗನಾ ರಣೌತ್ ಅವರ ಝಾನ್ಸಿ ರಾಣಿ ಜೀವನಾಧಾರಿತ "ಮಣಿಕರ್ಣಿಕಾ" ಬಿಡುಗಡೆಯಾಗಿದ್ದರೂ ಸಹ "ಉರಿ" ಚಿತ್ರಕ್ಕೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿಲ್ಲ.
ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಉಗ್ರರು ನಮ್ಮ ಸೈನಿಕರ ಮೇಲೆ ನಡೆಸಿದ ಮಾರಣಾಂತಿಕ ದಾಳಿಯ ಪ್ರತಿಯಾಗಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನುಗ್ಗಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನ ಕಾಲ್ಪನಿಕ ಮರುನಿರ್ಮಾಣವೇ "ಉರಿ" ಚಿತ್ರವಾಗಿ ಮೂಡಿಬಂದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos