ನವದೆಹಲಿ: ಕಾನೂನು ಕೈಗೆತ್ತಿಕೊಳ್ಳುವ ಬಿಜೆಪಿ ಶಾಸಕರು/ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಎಚ್ಚರಿಕೆ ಕೇವಲ ಕಣ್ಣೊರೆಸುವ ಹೇಳಿಕೆಯಾಗಿದೆ.
ನರೇಂದ್ರ ಮೋದಿ ಅವರು ಕೇವಲ ಭಾಷಣ ಮಾಡುವ ಬದಲು ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಮೇಲೆ ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆ ನಡೆಸಿರುವ ತಮ್ಮ ಪಕ್ಷದ ಶಾಸಕನ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು ಎಂದು ಕಾಂಗ್ರೆಸ್ ನಾಯಕಿ ಶೋಭಾ ಓಜಾ ಮಂಗಳವಾರ ಹೇಳಿದ್ದಾರೆ. ಶಾಸಕ ಆಕಾಶ್ ವಿಜಯ್ ವರ್ಗೀಯ ವಿರುದ್ಧ ಕ್ರಮ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ತಡೆದಿದ್ದು ಯಾರು? ಎಂದು ಪ್ರಶ್ನಿಸಿರುವ ಓಜಾ, ಕೇವಲ ಭಾಷಣ ಮಾಡುವ ಬದಲು ತಪ್ಪಿತಸ್ಥ ಬಿಜೆಪಿ ಶಾಸಕನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಾನೂನು ಕೈಗೆತ್ತಿಕೊಂಡ ಆಕಾಶ್ ನಂತಹ ನಾಯಕರಿಗೆ ಬಹುಮಾನ ನೀಡುವ ಸಂಪ್ರದಾಯವನ್ನು ಬಿಜೆಪಿ ಪಾಲಿಸಿಕೊಂಡು ಬಂದಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಕೊಂದ ನಾಥು ರಾಂ ಗೋಡ್ಸೆಯನ್ನು ಕೊಂಡಾಡಿ ಹೇಳಿಕೆ ನೀಡಿದ್ದ ಪ್ರಜ್ಯಾ ಸಿಂಗ್ ಠಾಕೂರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆಗಲೂ ಪ್ರಧಾನಿ ಮೋದಿ ಇದೇ ರೀತಿಯ ಹೇಳಿಕೆ ಮಾತ್ರ ನೀಡಿದ್ದರು. ಆದರೆ, ಆಕೆಯ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಟೀಕಿಸಿದ್ದಾರೆ.
ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಧ್ಯಪ್ರದೇಶದಲ್ಲಿ ಪುರಸಭೆ ಅಧಿಕಾರಿಯೊಬ್ಬರ ಮೇಲೆ ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆ ನಡೆಸಿದ್ದ ಹಿರಿಯ ನಾಯಕ ಕೈಲಾಷ್ ವಿಜಯ್ ವರ್ಗೀಯ ಪುತ್ರ ಶಾಸಕ ಆಕಾಶ್ ವಿಜಯ್ ವರ್ಗೀಯ ವರ್ತನೆಯ ಬಗ್ಗೆ ಆಸಂತೋಷ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿತ್ತು, ಹಲ್ಲೆ ನಡೆಸಿದ ವ್ಯಕ್ತಿ ಎಂತಹ ದೊಡ್ಡ ನಾಯಕ ಮಗನೇ ಇರಬಹುದು ಆತನ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ.
ಇಂದೋರ್ -3 ವಿಧಾನಸಭಾ ಕ್ಷೇತ್ರದ ಶಾಸಕ ಆಕಾಶ್ ವಿಜಯವರ್ಗೀಯ ಅವರನ್ನು ಹಲ್ಲೆ ಪ್ರಕರಣ ಸಂಬಂಧ ಪೊಲೀಸರು ನಂತರ ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಕೋರ್ಟ್ ಆತನನ್ನು ನ್ಯಾಯಾಂಗ ಬಂಧನ ಒಪ್ಪಿಸಿತ್ತು. ಕಳೆದ ಭಾನುವಾರ ಆತನನ್ನು ನ್ಯಾಯಾಲಯ ಜಾಮೀನು ಮೇಲೆ ಬಿಡುಗೆಡಗೊಳಿಸಿತ್ತು.