ಹೈದರಾಬಾದ್: ದೇಗುಲ ನಗರಿ ತಿರುಪತಿ ದಕ್ಷಿಣ ಭಾರತ ಸೌರ ಶಕ್ತಿ ಚಾಲಿತ ವಿಮಾನ ನಿಲ್ದಾಣಗಳ ಗುಂಪಿಗೆ ಸೇರುವ ಮೂಲಕ ತನ್ನ ಜನಪ್ರಿಯತೆಯ ಕೀರಿಟಕ್ಕೆ ಮತ್ತೊಂದು ಗರಿ ಮೂಡಿಸಿಕೊಂಡಿದೆ.
ಕೊಚ್ಚಿನ್, ತಿರುವನಂತಪುರ ಹಾಗೂ ವಿಜಯವಾಡ ವಿಮಾನ ನಿಲ್ದಾಣಗಳು ಪ್ರಸ್ತುತ ಸೌರ ಶಕ್ತಿ ಚಾಲಿತ ವಿಮಾನ ನಿಲ್ದಾಣಗಳಾಗಿವೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ( ಎಎಐ) ರೇಣುಗುಂಟ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಸೌರಶಕ್ತಿ ಸ್ಥಾವರವನ್ನು ಉದ್ಘಾಟಿಸಿದ್ದು, ದೇಶದ ಪ್ರಮುಖ ಸೌರ ಶಕ್ತಿ ಡೆವಲಪರ್ ಫೋರ್ತ್ ಪಾರ್ಟನರ್ ಎನರ್ಜಿಗೆ ಇದರ ಹೊಣೆ ವಹಿಸಲಾಗಿದೆ.
ಮುಂದಿನ ಮೂರು ವರ್ಷಗಳಲ್ಲಿ ತಿರುಪತಿ ಸೇರಿದಂತೆ ದಕ್ಷಿಣ ಭಾರತದ ಎಲ್ಲ ವಿಮಾನ ನಿಲ್ದಾಣಗಳು ಸೌರ ಶಕ್ತಿಯಿಂದ ಚಾಲಿತವಾಗಬೇಕು ಎಂದು ಎಎಇ ಪ್ರಾದೇಶಿಕ ಕಾರ್ಯಕಾರಿ ನಿರ್ದೇಶಕ ಎಸ್. ಶ್ರೀಕುಮಾರ್ ಹೇಳಿದ್ದಾರೆ.
ಹುಬ್ಬಳ್ಳಿ ಹಾಗೂ ಕಡಪ ವಿಮಾನ ನಿಲ್ದಾಣಗಳಲ್ಲಿ ಸದ್ಯದಲ್ಲೇ 8 ಮೆಗಾವಾಟ್ ಸೌರ ಶಕ್ತಿ ಸ್ಥಾವರಗಳು ಕಾರ್ಯಾರಂಭಗೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.
ತಿರುಪತಿಯಲ್ಲಿ ನಾಲ್ಕು ಎಕರೆ ಭೂಮಿಯಲ್ಲಿ ಸೌರ ಶಕ್ತಿ ಸ್ಥಾವರ ಆಳವಡಿಸಲಾಗಿದ್ದು, ವಿಮಾನ ನಿಲ್ದಾಣದ ರನ್ ವೇ ಸಮಾನಂತರವಾಗಿ ಇವುಗಳನ್ನು ಅಳವಡಿಸಲಾಗಿದೆ.
ಸೌರ ಶಕ್ತಿ ಉತ್ಪಾದನೆ ಹಗಲು ವೇಳೆ ಹೆಚ್ಚಾಗಿರುವ ಕಾರಣ ವಿದ್ಯುತ್ ಅಗತ್ಯತೆತೆಯ ಶೇ. 75ರಷ್ಟು ವಿದ್ಯುತ್ ಇವು ಪೂರೈಸಲಿವೆ. ಪ್ರಸ್ತುತ ವಿಮಾನ ನಿಲ್ದಾಣ ರಾತ್ರಿ ಕಾರ್ಯಾಚರಣೆ ನಡೆಸುತ್ತಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos