ಚರ್ಚೆಯನ್ನು ತಾಳ್ಮೆಯಿಂದ ಆಲಿಸಿ: ಸಂಸತ್ ಸದಸ್ಯರಿಗೆ ಅಮಿತ್ ಶಾ ಕ್ಲಾಸ್!
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೋಕಸಭೆಯಲ್ಲಿ ಸೋಮವಾರ ಸದನದಲ್ಲಿ ನಡೆಯುವ ಚರ್ಚೆಯನ್ನು ತಾಳ್ಮೆಯಿಂದ ಆಲಿಸುವಂತೆ ಸದಸ್ಯರಿಗೆ ಕಿವಿಮಾತು ಹೇಳಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕಾಯ್ದೆ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ವಿಪಕ್ಷ ಸದಸ್ಯರು ವಾಗ್ವಾದಕ್ಕೆ ಮುಂದಾದ ಸಂದರ್ಭದಲ್ಲಿ ಅವರು ಈ ಸಲಹೆ ನೀಡಿದರು.
ಬಿಜೆಪಿ ಸಂಸದ, ಜಲಸಂಪನ್ಮೂಲ ಹಾಗೂ ನದಿ ಅಭಿವೃದ್ಧಿ ಸಚಿವ ಬಾಗ್ ಪತ್ ಸತ್ಯಪಾಲ್ ಸಿಂಗ್ ಅವರ ವಿಷಯದಲ್ಲಿ ಹೈದರಾಬಾದ್ ಸಂಸದ ಹಾಗೂ ಅಸಾದುದ್ದೀನ್ ಓವೈಸಿ ಆಕ್ಷೇಪಣೆ ವ್ಯಕ್ತಪಡಿಸಿದ್ದು ಮಾತಿನ ಚಕಮಕಿಗೆ ಕಾರಣವಾಯಿತು.
ಯುಪಿಎ ಆಡಳಿತಾವಧಿಯಲ್ಲಿ ಬಾಗ್ ಪತ್ ಸತ್ಯಪಾಲ್ ಅವರ ರಾಜಕೀಯ ಹಸ್ತಕ್ಷೇಪ ಮತ್ತು ಇಶ್ರತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರವಾಣಿ ಕರೆಗಳ ಕುರಿತು ಅಸಾದುದ್ದೀನ್ ಒವೈಸಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ, ನಿಶ್ಯಬ್ದ ಕಾಪಾಡುವಂತೆ ಅಮಿತ್ ಶಾ ಮನವಿ ಮಾಡಿದರು.
“ನಿಮ್ಮ ಸಾಮರ್ಥ್ಯವನ್ನು ಚರ್ಚೆಯನ್ನು ತಾಳ್ಮೆಯಿಂದ ಆಲಿಸುವುದರಲ್ಲಿಯೂ ತೋರಿಸಿ. ಡಿಎಂಕೆ ಸದಸ್ಯ ಎ ರಾಜಾ ಮಾತನಾಡುತ್ತಿದ್ದಾಗ ಸುಮ್ಮನಿದ್ದ ನೀವು ಸತ್ಯಪಾಲ್ ಸಿಂಗ್ ಮಾತನ್ನು ಆಲಿಸುವುದಿಲ್ಲವೇಕೆ? ಏಕೀ ತಾರತಮ್ಯ; ಎಂದರು.
ಕೂಡಲೇ ವಿಪಕ್ಷ ಸದಸ್ಯರೊಬ್ಬರು;ನಮ್ಮನ್ನು ಬೆದರಿಸಲು ಯತ್ನಿಸುತ್ತಿದ್ದೀರಾ; ಎಂದಾಗ, ನಾನು ಯಾರನ್ನೂ ಬೆದರಿಸುತ್ತಿಲ್ಲ. ಆದರೆ ಭಯವು ನಿಮ್ಮ ಅಂತರ್ಗತವಾಗಿದ್ದರೆ ಏನೂ ಮಾಡಲಾಗದು; ಎಂದು ಅಮಿತ್ ಶಾ ತಿರುಗೇಟು ನೀಡಿದರು.
ಸದನದಲ್ಲಿ ಚರ್ಚೆ ನಡೆಯುವಾಗ ಶಿಸ್ತು ಕಾಪಾಡುವಂತೆ ಸ್ಪೀಕರ್ ಓಂ ಬಿರ್ಲಾಸೂಚಿಸಿದ ಬಳಿಕ, ಮತ್ತೆ ಚರ್ಚೆ ಆರಂಭವಾಯಿತು.ಇದಕ್ಕೂ ಮುನ್ನ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕಾಯ್ದೆಯಲ್ಲಿ ಅಂಶಗಳ ಕುರಿತು ಪ್ರಸ್ತಾಪಿಸಿದ ಗೃಹ ಖಾತೆ ರಾಜ್ಯ ಸಚಿವ ಜಿ ಕೃಷ್ಣ ರೆಡ್ಡಿ, ಹೊಸ ಕರಡು ಮಸೂದೆಯು ಎನ್ಐಎಗೆ ಹೆಚ್ಚಿನ ಬಲ ನೀಡಲಿದ್ದು, ಭಯೋತ್ಪಾದನೆ ಹತ್ತಿಕ್ಕಲು ಸಹಕರಿಸುತ್ತದೆ ಎಂದು ಹೇಳಿದರು.
ನೂತನ ಕರಡು ಮಸೂದೆಯು, ಅಂತರರಾಷ್ಟ್ರೀಯ ಒಪ್ಪಂದಗಳು ಮತ್ತು ಇತರ ದೇಶಗಳ ದೇಶೀಯ ಕಾನೂನುಗಳಿಗೆ ಒಳಪಟ್ಟು ಭಾರತದ ಹೊರಗೆ ನಡೆಯುವ ನಿಗದಿತ ಅಪರಾಧಗಳನ್ನು ತನಿಖೆ ಮಾಡುವ ಅಧಿಕಾರವನ್ನೂ ಎನ್ಐಎಗೆ ನೀಡಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos