ಲೋಕಸಭೆಯಲ್ಲಿ ಎನ್ಐಎ ತಿದ್ದುಪಡಿ ಮಸೂದೆ ಅಂಗೀಕಾರ: ಮೋದಿ ಸರ್ಕಾರ ಕಾನೂನು ದುರುಪಯೋಗ ಮಾಡಲ್ಲ-ಅಮಿತ್ ಶಾ
ನವದೆಹಲಿ: ತಿದ್ದುಪಡಿ ಮಸೂದೆ ಮೇಲಿನ ಚರ್ಚೆ ವೇಳೆ, ಮಸೂದೆ ಮಂಡಿಸಿದ ಗೃಹ ಸಚಿವ ಅಮಿತ್ ಶಾ ಹಾಗೂ ವಿಪಕ್ಷಗಳ ನಡುವೆ ವಾಗ್ಯುದ್ಧ ನಡೆಯಿತು. ಎನ್ಐಎ ತಿದ್ದುಪಡಿ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಕಾಂಗ್ರೆಸ್ ನ ಆಕ್ಷೇಪಕ್ಕೆ ತಿರುಗೇಟು ನೀಡಿರುವ ಅಮಿತ್ ಶಾ, ಯುಪಿಎ ಸರ್ಕಾರದ ಅವಧಿಯಲ್ಲಿ ಪೋಟಾ ಕಾಯ್ದೆಯನ್ನು ರದ್ದುಪಡಿಸಲಾಗಿತ್ತು. ಭಯೋತ್ಪಾದಕ ಚಟುವಟಿಕೆಗಳ ನಿಗ್ರಹ (ಪೋಟಾ) ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂಬ ಕಾರಣಕ್ಕಾಗಿ ಅಲ್ಲದೇ ಓಟ್ ಬ್ಯಾಂಕ್ ನ್ನು ಉಳಿಸಿಕೊಳ್ಳುವುದಕ್ಕೆ ಕಾಂಗ್ರೆಸ್ ಈ ಕೆಲಸ ಮಾಡಿತ್ತು ಎಂದು ಅಮಿತ್ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪೋಟಾ ಕಾಯ್ದೆ ವಾಪಸ್ ಪಡೆದ ನಂತರ ದೇಶದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚಾದವು. ಮುಂಬೈ ದಾಳಿಯ ನಂತರ ಎನ್ಐಎ ರಚನೆಗೆ ಯುಪಿಎ ಸರ್ಕಾರದ ಮೇಲೆ ಒತ್ತಡ ಬಂದಿತ್ತು ಎಂದು ಅಮಿತ್ ಶಾ ಹೇಳಿದ್ದಾರೆ. ಎನ್ಐಎ ತಿದ್ದುಪಡಿ ಮಸೂದೆಗೆ ಎಲ್ಲಾ ಪಕ್ಷಗಳೂ ಬೆಂಬಲಿಸಬೇಕು, ಈ ವಿಷಯದಲ್ಲಿ ಸದನದಲ್ಲಿನ ಒಡಕು ಭಯೋತ್ಪಾದಕರಿಗೆ ನೈತಿಕ ಸ್ಥೈರ್ಯ ಹೆಚ್ಚಿಸುವ ಸಂದೇಶ ರವಾನೆ ಮಾಡುತ್ತದೆ ಎಂದು ಅಮಿತ್ ಶಾ ಹೇಳಿದರು.
ಮೋದಿ ಸರ್ಕಾರಕ್ಕೆ ಎಂದಿಗೂ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶ ಇಲ್ಲ. ಸಂಸತ್ ಭಯೋತ್ಪಾದಕರ ವಿರುದ್ಧ ಒಂದೇ ಧ್ವನಿಯಲ್ಲಿ ಮಾತನಾಡಬೇಕೆಂದು ಅಮಿತ್ ಶಾ ಆಗ್ರಹಿಸಿದ್ದಾರೆ.
ನಾನು ಯಾರು ?, ದೇಶಕ್ಕೆ ಸೇರದವನಾ? ಅಥವಾ ಭಯೋತ್ಪಾದಕನ ? ಲೋಕಸಭೆಯಲ್ಲಿ ಅಸಾದುದ್ದೀನ್ ಓವೈಸಿ ಪ್ರಶ್ನೆ
ಹೈದ್ರಾಬಾದ್ ನಗರ ಭಯೋತ್ಪಾಕರ ಆವಾಸ ಸ್ಥಾನ ಎಂಬ ಕೇಂದ್ರ ಗೃಹ ಖಾತೆ ರಾಜ್ಯಸಚಿವ ಜಿ. ಕಿಶನ್ ರೆಡ್ಡಿ ಅವರ ಹೇಳಿಕೆಗೆ ಎ ಐ ಎಂ ಐ ಎಂ ಪಕ್ಷದ ಸದಸ್ಯ ಅಸಾದುದ್ದೀನ್ ಓ ವೈಸಿ ಸೋಮವಾರ ಲೋಕಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ರಾಷ್ಟ್ರೀಯ ತನಿಖಾ ಸಂಸ್ಥೆ ತಿದ್ದುಪಡಿ ವಿಧೇಯಕ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಓವೈಸಿ, ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ಗುಂಪು ತಮ್ಮನ್ನು ಹಿಂದೂ ರಾಷ್ಟ್ರದ ಗುಲಾಮ ಎಂದು ಬಣ್ಣಿಸಲಾಗಿರುವ ವಿಡಿಯೋ ದೇಶಾದ್ಯಂತ ವೈರಲ್ ಆಗಿರುವುದನ್ನು ಉಲ್ಲೇಖಿಸಿದ ಅವರು, ಈ ಸನ್ನಿವೇಶದಲ್ಲಿ ನನ್ನ ಪ್ರಶ್ನೆ, ನಾನು ಏನು ? ನಾನು ಈ ದೇಶಕ್ಕೆ ಸೇರಿದವನಾ?, ಅಥವಾ ಭಯೋತ್ಪಾದಕರೊಂದಿಗೆ ಸೇರಿದವನಾ..? ಸರ್ಕಾರವೇ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಎನ್ ಐ ಎ ತಿದ್ದುಪಡಿ ವಿಧೇಯಕವನ್ನು ತೀವ್ರವಾಗಿ ವಿರೋಧಿಸಿದ ಅವರು, ತನಿಖಾ ಸಂಸ್ಥೆ ನಿಬಾಯಿಸಿದ ಹಳೆಯ ಪ್ರಕರಣಗಳಲ್ಲಿ ಕೆಲವು ಆರೋಪಿಗಳು ನ್ಯಾಯಾಲಯದಿಂದ ಖುಲಾಸೆಗೊಂಡಿದ್ದಾರೆ. ಹಾಗಾಗಿ ಖುಲಾಸೆಗೊಂಡವರಲ್ಲಿ ಸರ್ಕಾರ ಲಿಖಿತವಾಗಿ ಕ್ಷಮೇಯಾಚಿಸಲಿದೆಯೇ ? ಎಂದು ಸರ್ಕಾರವನ್ನು ಓವೈಸಿ ಪ್ರಶ್ನಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos