ನವದೆಹಲಿ: ಪಾಕಿಸ್ತಾನ ಗಡಿಯಲ್ಲಿ ಭಾರತ ನಿಯೋಜಿಸಿರುವ ಯುದ್ಧವಿಮಾನಗಳನ್ನು ಹಿಂಪಡೆಯುವವರೆಗೆ ತನ್ನ ವಾಯು ಪ್ರದೇಶದಲ್ಲಿ ಭಾರತದ ನಾಗರಿಕ ವಿಮಾನದ ಸಂಚಾರಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನ, ಈಗ ತನ್ನ ಹಠ ಸಡಿಲಿಸಿ, ವಾಯುಪ್ರದೇಶವನ್ನು ಎಲ್ಲಾ ರೀತಿಯ ನಾಗರಿಕ ಸಂಚಾರಕ್ಕೆ ಮುಕ್ತವಾಗಿಸುವುದಾಗಿ ಘೋಷಿಸಿದೆ.
ಪಾಕಿಸ್ತಾನದ ಈ ನಿರ್ಧಾರವನ್ನು ಭಾರತದ ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಿ ಸ್ವಾಗತಿಸಿದ್ದಾರೆ. 'ಇದು ಉತ್ತಮ ಸುದ್ದಿ. ಇದರಿಂದ ವಿಮಾನ ಪ್ರಯಾಣಿಕರಿಗೆ ಅನುಕೂಲವಾಗಲಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದರಿಂದ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ನೆರವಾಗಲಿದೆ. ಇತ್ತೀಚೆಗಷ್ಟೇ ಅಮೆರಿಕದ ಏರ್ ಲೈನ್ಸ್ ಸಂಸ್ಥೆ, ಪಾಕಿಸ್ತಾನದ ವಾಯು ಪ್ರದೇಶದ ನಿರ್ಬಂಧದ ಹಿನ್ನೆಲೆಯಲ್ಲಿ ಅಕ್ಟೋಬರ್ 26ರವರೆಗೆ ಅಮೆರಿಕದಿಂದ ದೆಹಲಿ ಹಾಗೂ ಮುಂಬೈಗೆ ಪ್ರಯಾಣಿಸುವ ವಿಮಾನ ಸಂಚಾರವನ್ನು ರದ್ದುಗೊಳಿಸುವುದಾಗಿ ಪ್ರಕಟಿಸಿತ್ತು.