ಕಾಜಿರಂಗಾ ಅರಣ್ಯದಲ್ಲಿ ಪ್ರವಾಹ
ಗುವಾಹತಿ: ಅಸ್ಸಾಂನಲ್ಲಿ ಸಂಭವಿಸಿರುವ ಭಾರಿ ಮಳೆ ಮತ್ತು ಭೀಕರ ಪ್ರವಾಹದಿಂದಾಗಿ ಖ್ಯಾತ ಪ್ರವಾಸಿಧಾಮ ಕಾಜಿರಂಗಾ ಸಂರಕ್ಷಿತಾರಣ್ಯದಲ್ಲಿ ಈ ವರೆಗೂ ಸುಮಾರು 50ಕ್ಕೂ ಹೆಚ್ಚು ಅಪರೂಪದ ವನ್ಯ ಮೃಗಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಅಸ್ಸಾಂ ಅರಣ್ಯಾಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕಾಜಿರಂಗಾ ಅರಣ್ಯ ಪ್ರದೇಶದಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದಾಗಿ ಅರಣ್ಯ ಪ್ರದೇಶ ನೀರಿನಲ್ಲಿ ಮುಳುಗಡೆಯಾಗಿದೆ. ಪರಿಣಾಮ ಈ ವರೆಗೂ ಸುಮಾರು 50ಕ್ಕೂ ಹೆಚ್ಚು ವನ್ಯಪ್ರಾಣಿಗಳು ಸಾವನ್ನಪ್ಪಿವೆ. ಸಾವನ್ನಪ್ಪಿದ ಪ್ರಾಣಿಗಳ ಪೈಕಿ, ಒಂದು ಆನೆ, ಹಲವಾರು ಕಾಡು ಹಂದಿಗಳು, ಜಿಂಕೆ, ಸಂಬಾರ್ ಗಳು, ಅಪರೂಪದ ರೈನೋಗಳು, ಕೃಷ್ಮಮೃಗಳು ಸಾವನ್ನಪ್ಪಿವೆ. ಪ್ರಸ್ತುತ ಎಲ್ಲ ಪ್ರಾಣಿಗಳ ಕಳೇಬರವನ್ನು ಸಂಗ್ರಹಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಅಂತೆಯೇ ಕಳೆದೊಂದು ವಾರದಿಂದ ಸಾಗಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಈ ವರೆಗೂ ಸುಮಾರು 57ಕ್ಕೂ ಹೆಚ್ಚು ಪ್ರಾಣಿಗಳನ್ನು ರಕ್ಷಿಸಲಾಗಿದೆ. ಈ ಪೈಕಿ ರಕ್ಷಿಸಲ್ಪಟ್ಟ ಪ್ರಾಣಿಗಳ ಪೈಕಿ 4 ಪ್ರಾಣಿಗಳು ವನ್ಯಜೀವಿ ಪುನರ್ವಸತಿ ಮತ್ತು ಸಂರಕ್ಷಣೆ ಕೇಂದ್ರದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿವೆ. ಜುಲೈ 13ರಿಂದಲೂ ಕೇಂದ್ರಕ್ಕೆ ರಕ್ಷಿಸಲ್ಪಟ್ಟ ಪ್ರಾಣಿಗಳನ್ನು ಸೇರಿಸಲಾಗುತ್ತಿದ್ದು, ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಮತ್ತೆ ಕಾಡಿಗೆ ಕಳುಹಿಸುತ್ತಿದ್ದೇವೆ. ಹೀಗೆ ಬಂದ ಪ್ರಾಣಿಗಳ ಪೈಕಿ ಶೇ.85ರಷ್ಟು ಪ್ರಾಣಿಗಳನ್ನು ಮರಳಿ ಕಾಡಿಗೆ ಬಿಡಲಾಗಿದೆ ಎಂದು ಹೇಳಿದರು.
ಇನ್ನು ಭೀಕರ ಮಳೆ ಮತ್ತು ಪ್ರವಾಹದಿಂದಾದಿ ಅಸ್ಸಾಂ ಕಾಜಿರಂಗಾ ಸಂರಕ್ಷಿತಾರಣ್ಯ ಪ್ರದೇಶದ ಬರೊಬ್ಬರಿ ಸುಮಾರು ಶೇ.70 ಭೂ ಪ್ರದೇಶ ನೀರಿನಲ್ಲಿ ಮುಳುಗಡೆಯಾಗಿದೆ. ಹೀಗಾಗಿ ಪ್ರಾಣಿಗಳ ರಕ್ಷಣೆ ಅತ್ಯಗತ್ಯವಾಗಿದ್ದು, ಇದಕ್ಕೆ ಸ್ಥಳೀಯರೂ ಕೂಡ ವ್ಯಾಪಕ ನೆರವು ನೀಡುತ್ತಿದ್ದಾರೆ ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos