ನವದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ಅಂತಿಮ ವರದಿಯನ್ನು ತಯಾರಿಸಲು ನೀಡಲಾಗಿರುವ ಗಡುವನ್ನು ಸುಪ್ರೀಂ ಕೋರ್ಟ್ ಆಗಸ್ಟ್ 31ರ ವರೆಗೆ ವಿಸ್ತರಣೆ ಮಾಡಿದೆ. ಆದರೆ ಶೇ.20ರಷ್ಟು ಸ್ಯಾಂಪಲ್ ಗಳ ಮರು ಪರಿಶೀಲನೆ ಕೋರಿ ಸಲ್ಲಿಸಿದ್ದ ಅರ್ಜಿಯವನ್ನು ವಜಾಗೊಳಿಸಿದೆ.
ಈ ಮುಂಚೆ ಜುಲೈ 31ರ ಗಡುವನ್ನು ವಿಸ್ತರಿಸಲು ನಿರಾಕರಿಸಿದ್ದ ಸುಪ್ರೀಂ ಕೋರ್ಟ್, ಇಂದು ಒಂದು ತಿಂಗಳು ಗಡುವು ವಿಸ್ತರಿಸಿ ಆದೇಶ ನೀಡಿದೆ.
ಭಾರತ ವಿಶ್ವದ ನಿರಾಶ್ರಿತರ ರಾಜಧಾನಿಯಾಗಲು ಸಾಧ್ಯವಿಲ್ಲ. ಹೀಗಾಗಿ ಅಸ್ಸಾಂ ಎನ್ಆರ್ ಸಿ ವರದಿ ಸಿದ್ಧಪಡಿಸಲು ಜುಲೈ 31ರ ಗುಡವು ವಿಸ್ತರಿಸಬೇಕು ಎಂದು ಕೇಂದ್ರ ಮತ್ತು ಅಸ್ಸಾಂ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದವು. ಅಲ್ಲದೆ ತಪ್ಪಾಗಿ ಎನ್ ಆರ್ ಸಿ ಪಟ್ಟಿಗೆ ಸೇರಿದ ಮತ್ತು ಸೇರದೆ ಇರುವುದನ್ನು ಪತ್ತೆ ಹಚ್ಚಲು ಶೇ.20ರಷ್ಟು ಸ್ಯಾಂಪಲ್ ಪರಿಶೀಲಿನೆಗೆ ಅವಕಾಶ ನೀಡಬೇಕು ಎಂದು ಎರಡೂ ಸರ್ಕಾರಗಳು ಮನವಿ ಮಾಡಿದ್ದವು. ಆದರೆ ಸ್ಯಾಂಪಲ್ ಪರಿಶೀಲನೆಗೆ ಕೋರ್ಟ್ ನಿರಾಕರಿಸಿದೆ.