ಶ್ಯಾಮ್ ಬೆನೆಗಲ್, ಅನುರಾಗ್ ಕಶ್ಯಪ್, ಮಣಿರತ್ನಂ
ನವದೆಹಲಿ: ಗಾಯಕಿ ಶುಭಾ ಮುದ್ಗಲ್, ನಟಿ ಕೊಂಕಣ್ ೇನ್ ಶರ್ಮಾ, ಚಿತ್ರ ನಿರ್ಮಾಪಕ ಶ್ಯಾಮ್ ಬೆನೆಗಲ್, ಅನುರಾಗ್ ಕಶ್ಯಪ್ ಮತ್ತು ಮಣಿರತ್ನಂ ಸೇರಿದಂತೆ 49 ಮಂದಿ ಜನಪ್ರಿಯ ವ್ಯಕ್ತಿಗಳು ದೇಶಾದ್ಯಂತ ನಡೆಯುತ್ತಿರುವ ಗುಂಪು ಹಲ್ಲೆ ಕುರಿತು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಜುಲೈ 23ರ ದಿನಾಂಕ ಇರುವ ಪತ್ರದಲ್ಲಿ ಈ ಜನಪ್ರಿಯ ವ್ಯಕ್ತಿಗಳೆಲ್ಲಾ ಸೇರಿ ಗುಂಪು ಹಲ್ಲೆ ನಡೆಸುವವರಿಗೆ "ಕಠಿಣ ಶಿಕ್ಷೆ, ಎಲ್ಲರಿಗೆ ಪಾಠವಾಗುವಂತೆ ಶಿಕ್ಷೆ,"ಯನ್ನು ಅತ್ಯಂತ "ತ್ವರಿತ ಹಾಗೂ ಖಚಿತ"ವಾಗಿ ನೀಡಬೇಕು ಎಂದು ಕೋರಿದ್ದಾರೆ.
"ಮುಸ್ಲಿಮರು, ದಲಿತರು ಮತ್ತು ಇತರ ಅಲ್ಪಸಂಖ್ಯಾತರ ಹತ್ಯೆಯನ್ನು ತಕ್ಷಣವೇ ನಿಲ್ಲಿಸಬೇಕು. ಎನ್ಸಿಆರ್ಬಿ (ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ) ವರದಿ ನೋಡಿ ನಾವು ಕಂಗಾಲಾಗಿದ್ದೇವೆ. 2016 ರಲ್ಲಿ ದಲಿತರ ವಿರುದ್ಧ ಕನಿಷ್ಟ 840 ದೌರ್ಜನ್ಯ ನಡೆದಿದೆ. ಆದರೆ ಈ ಅಪರಾಧಗಳಿಗೆ ಆಗಿರುವ ಶಿಕ್ಷೆ ಪ್ರಮಾಣವು ಅತ್ಯಂತ ಕನಿಷ್ಟವಾಗಿದೆ.
"ಇದಲ್ಲದೆ, ಜನವರಿ 1, 2009 ಮತ್ತು ಅಕ್ಟೋಬರ್ 29, 2018 ರ ನಡುವೆ 254 ಧಾರ್ಮಿಕ ಹಿನ್ನೆಲೆಯ ದ್ವೇಷದ ಅಪರಾಧಗಳು ವರದಿಯಾಗಿದ್ದು, ಅಲ್ಲಿ ಕನಿಷ್ಠ 91 ಜನರು ಸಾವನ್ನಪ್ಪಿದ್ದಾರೆ ಮತ್ತು 579 ಮಂದಿ ಗಾಯಗೊಂಡಿದ್ದಾರೆ ನಾಗರಿಕರಲ್ಲಿನ ಧಾರ್ಮಿಕ ದ್ವೇಷ ಭಾರತದಲ್ಲಿನ (ಒಟ್ಟಾರೆ ಜನಸಂಖ್ಯೆಯ ಶೇ. 14ರಷ್ಟು) ಮುಸ್ಲಿಮರಲ್ಲಿ ಶೇಕಡಾ 62ರಷ್ಟು ಮಂದಿ ಸಂತ್ರಸ್ಥರಾಗಿದ್ದರೆ.ಇನ್ನು ಕ್ರಿಶ್ಚಿಯನ್ನರು (ಜನಸಂಖ್ಯೆಯ ಶೇ. 2) , 14 ಶೇಕಡಾದಷ್ಟು ಮಂದಿ ವಿವಿಧ ಪ್ರಕರಣಗಳಲ್ಲಿ ಸಂತ್ರಸ್ಥರಾಗಿದ್ದಾರೆ. ಇನ್ನು ಮೇ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇಂತಹಾ ಪ್ರಕರಣಗಳ ಸಂಖ್ಯೆ ಶೇ.90ರಷ್ಟು ಹೆಚ್ಚಾಗಿದೆ. ಹಾಗಾಗಿ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಗುಂಪು ಹಲ್ಲೆ ಖಂಡಿಸಿದ ಮಾತ್ರಕ್ಕೆ ಎಲ್ಲವೂ ಸರಿಹೋಗುವುದಿಲ್ಲ.
"ದುಷ್ಕರ್ಮಿಗಳ ವಿರುದ್ಧ ನಿಜವಾಗಿ ಏನು ಕ್ರಮ ಕೈಗೊಳ್ಳಲಾಗಿದೆ? ಅಂತಹ ಅಪರಾಧಗಳನ್ನು ಜಾಮೀನು ರಹಿತವೆಂದು ಘೋಷಿಸಬೇಕು ಮತ್ತು ಆದರ್ಶಪ್ರಾಯವಾದ ಶಿಕ್ಷೆಯನ್ನು ತ್ವರಿತವಾಗಿ ಮತ್ತು ಖಚಿತವಾಗಿ ನೀಡಬೇಕು ಎಂದು ನಾವು ಬಲವಾಗಿ ಒತ್ತಾಯಿಸುತ್ತೇವೆ. ಇಂತಹಾ ಹತ್ಯೆ ಪ್ರಕರಣಗಳಲ್ಲಿ ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆ ವಿಧಿಸಬೇಕು." ಅವರು ಆಗ್ರಹಿಸಿದ್ದಾರೆ.
ಅಲ್ಲದೆ ಭಿನ್ನಾಭಿಪ್ರಾಯಗಳಿಲ್ಲದೆ ಪ್ರಜಾಪ್ರಭುತ್ವವಿರಲು ಸಾಧ್ಯವಿಲ್ಲ ಎಂದು ಅವರು ಪ್ರಧಾನಿಗೆ ಪತ್ರದಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos