ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪಾಕಿಸ್ತಾನ ವಿರುದ್ಧ 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಕಾರ್ಗಿಲ್ ಯುದ್ಧ ನಡೆದು ಇಂದಿಗೆ 20 ವರ್ಷ.
ಕಾರ್ಗಿಲ್ ವಿಜಯ ದಿವಸದ ಈ ಸಂದರ್ಭದಲ್ಲಿ ಭಾರತ ಮಾತೆಯ ಪುತ್ರರಿಗೆ ನನ್ನ ನಮನಗಳು. ಈ ದಿನ ನಮ್ಮ ಸೈನಿಕರ ತ್ಯಾಗ, ಬಲಿದಾನ, ಧೈರ್ಯಗಳನ್ನು ಸ್ಮರಿಸುವ ದಿನ ಎಂದು ಟ್ವೀಟ್ ಮಾಡಿದ್ದಾರೆ. ಭಾರತ ಮಾತೆಯನ್ನು ರಕ್ಷಿಸಲು ತಮ್ಮ ಜೀವ ಬಲಿದಾನ ಮಾಡಿದ ಶೌರ್ಯ ಯೋಧರಿಗೆ ನಮನಗಳು ಎಂದಿದ್ದಾರೆ.
1999ರಲ್ಲಿ ಪಾಕಿಸ್ತಾನ ವಿರುದ್ಧ ಕಾರ್ಗಿಲ್ ನಲ್ಲಿ ಭಾರತ ಯುದ್ಧದಲ್ಲಿ ಜಯ ಗಳಿಸಿದ ದಿನವನ್ನು ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ.
ಇದೇ ಸಂದರ್ಭದಲ್ಲಿ ಮೋದಿಯವರು 1999ರಲ್ಲಿ ಯುದ್ಧದ ಸಂದರ್ಭದಲ್ಲಿ ಕಾರ್ಗಿಲ್ ಗೆ ಭೇಟಿ ನೀಡಿ ಸೈನಿಕರೊಂದಿಗೆ ನಡೆಸಿದ ಮಾತುಕತೆಯ ಫೋಟೋಗಳನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
1999ರಲ್ಲಿ ನಾನು ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಅಲ್ಲಿಗೆ ಹೋಗಿ ಸೈನಿಕರೊಂದಿಗೆ ನಡೆಸಿದ ಸಂವಾದ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಬರೆದುಕೊಂಡಿದ್ದಾರೆ.