ಶ್ರೀನಗರ: ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಶನಿವಾರ ಪಾಕಿಸ್ತಾನ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆಯ ಯೋಧ ಹುತಾತ್ಮರಾಗಿದ್ದಾರೆ.
ಕುಪ್ವಾರ ಜಿಲ್ಲೆಯ ಮಚಿಲ್ ವಿಭಾಗದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೇನೆ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಲ್ಯಾನ್ಸೆ ನಾಯಕ್ ರಾಜೇಂದರ್ ಸಿಂಗ್ ಹುತಾತ್ಮಗೊಂಡಿದ್ದಾರೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ ಕುಪ್ವಾರ ಜಿಲ್ಲೆಯ ಮಚಿಲ್ ವಲಯದಲ್ಲಿರುವ ಭಾರತೀಯ ಸೇನಾ ನೆಲೆ ಮೇಲೆ ಪಾಕಿಸ್ತಾನ ಸೇನಾ ಯೋಧರು ಅಪ್ರಚೋದಿತ ಗುಂಡಿನ ಮಳೆಗೈದರು. ಇದರಲ್ಲಿ 57 ರಾಷ್ಟ್ರೀಯ ರೈಫಲ್ಸ್ ನ ಲ್ಯಾನ್ಸೆ ನಾಯಕ್ ರಾಜೇಂದರ್ ಸಿಂಗ್ ಗಂಭೀರವಾಗಿ ಗಾಯಗೊಂಡರು. ಹತ್ತಿರದ ವೈದ್ಯಕೀಯ ಚಿಕಿತ್ಸಾ ಕೇಂದ್ರಕ್ಕೆ ಅವರನ್ನು ಕರೆದೊಯ್ದರು ಕೂಡ ತೀವ್ರ ಗಾಯಗೊಂಡಿದ್ದರಿಂದ ಅಸುನೀಗಿದರು.
ಇಂದು ಬೆಳಗ್ಗೆ ಗಡಿ ನಿಯಂತ್ರಣ ರೇಖೆ ಬಳಿ ರಾಷ್ಟ್ರೀಯ ರೈಫಲ್ಸ್ ಯೋಧರು ಕಣ್ಗಾವಲು ಇರಿಸಿದ್ದ ವೇಳೆ ಈ ದಾಳಿ ನಡೆದಿದೆ.