ಬೆಂಗಳೂರು: ನಿಗೂಢವಾಗಿ ನಾಪತ್ತೆಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್ ಎಂ ಕೃಷ್ಣ ಅವರ ಅಳಿಯ ಹಾಗೂ ಕಾಫಿ ಡೇ ಮಾಲೀಕ ವಿಜಿ ಸಿದ್ದಾರ್ಥ್ ಅವರಿಗೆ ಕಿರುಕುಳ ನೀಡಿದ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಆದಾಯ ತೆರಿಗೆ ಇಲಾಖೆ, ಕಾಫಿ ಡೇ ಆಡಳಿತ ಮಂಡಳಿ ನಿರ್ದೇಶಕರಿಗೆ ಹಾಗೂ ಸಿಬ್ಬಂದಿಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿನ ಅವರ ಸಹಿ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸಿದೆ.
ಎರಡು ದಿನಗಳ ಹಿಂದೆ ಸಿದ್ಧಾರ್ಥ್ ಅವರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿನ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಐಟಿ ಇಲಾಖೆ ತಿಳಿಸಿದೆ.
ಕರ್ನಾಟಕದ ಪ್ರಭಾವಿ ರಾಜಕಾರಣಿಯೊಬ್ಬರ ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿರುವ ವೇಳೆ ವಿಜಿ ಸಿದ್ದಾರ್ಥಗೆ ಸಂಬಂಧಿಸಿದ ಹಣಕಾಸಿನ ದಾಖಲೆ, ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಮೇರೆಗೆ ಐಟಿ ಇಲಾಖೆ ಕಾಫಿ ಡೇ ಮತ್ತು ಸಿದ್ದಾರ್ಥ ಮನೆ ಮೇಲೆ ದಾಳಿ ನಡೆಸಿತ್ತು.
ದಾಳಿ ವೇಳೆ ಸಿಂಗಾಪೂರ್ ಪ್ರಜೆಯಾಗಿರುವ ವ್ಯಕ್ತಿಯೊಬ್ಬರ ಬಳಿ 1.2 ಕೋಟಿ ರೂಪಾಯಿ ಹಣ ಪತ್ತೆಯಾಗಿದ್ದು, ಇದು ವಿಜಿ ಸಿದ್ದಾರ್ಥ್ ಅವರಿಗೆ ಸೇರಿದ ಹಣ ಎಂದು ಸ್ವತಃ ಸಿದ್ಧಾರ್ಥ್ ಒಪ್ಪಿಕೊಂಡಿರುವುದಾಗಿ ಐಟಿ ಇಲಾಖೆ ಮಾಹಿತಿ ನೀಡಿದೆ.
ಶೋಧ ಕಾರ್ಯಾಚರಣೆಯಲ್ಲಿ ವಿಜಿ ಸಿದ್ದಾರ್ಥ್ ಬಳಿ ಲೆಕ್ಕವಿಲ್ಲದ ಸುಮಾರು 362 ಕೋಟಿ ರೂಪಾಯಿ ಹಣ ಇದ್ದಿರುವುದನ್ನು ಕೂಡ ಅವರು ಒಪ್ಪಿಕೊಂಡಿದ್ದರು. ಸಿದ್ದಾರ್ಥ್ ಇತ್ತೀಚೆಗಷ್ಟೇ ಐಟಿ ರಿಟರ್ನ್ ಸಲ್ಲಿಸಿದ್ದರು. ಆದರೆ ಬಹಿರಂಗಪಡಿಸದ ಆದಾಯದ ಬಗ್ಗೆ ಯಾವ ವಿವರವನ್ನೂ ಸಲ್ಲಿಸಿಲ್ಲ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ.
ಈ ಮಧ್ಯೆ, ಮೈಂಡ್ ಟ್ರೀ ಷೇರುಗಳನ್ನು ರಿಲೀಸ್ ಮಾಡುವಂತೆ ಐಟಿ ಇಲಾಖೆಗೆ ಸಿದ್ದಾರ್ಥ್ ಮನವಿ ಮಾಡಿಕೊಂಡಿದ್ದು, ಅದಕ್ಕೆ ಬದಲು ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ನ ಷೇರುಗಳನ್ನು ಭದ್ರತೆ ಕೊಡುವುದಾಗಿ ತಿಳಿಸಿದ್ದರು ಎಂದು ಐಟಿ ಇಲಾಖೆ ವಿವರಿಸಿದೆ. ಸಿದ್ದಾರ್ಥ್ ಮನವಿ ಮೇರೆಗೆ 13-02-19ರಂದು ಜಪ್ತಿ ಮಾಡಿಕೊಂಡಿದ್ದ ಮೈಂಡ್ ಟ್ರೀ ಷೇರುಗಳನ್ನು ನಿರ್ದಿಷ್ಟ ಷರತ್ತುಗಳೊಂದಿಗೆ ರಿವೋಕ್ ಮಾಡಲಾಗಿತ್ತು ಎಂದು ಐಟಿ ಇಲಾಖೆ ಸ್ಪಷ್ಟಪಡಿಸಿದೆ.
ಜು.27ರಂದು ಸಿದ್ಧಾರ್ಥ್ ಅವರು ಬರೆದಿದ್ದಾರೆ ಎನ್ನಲಾಗುತ್ತಿರುವ ಪತ್ರದಲ್ಲಿ ಐಟಿ ಇಲಾಖೆಯ ಹಿಂದಿನ ಡಿಜಿ ತಮಗೆ ಅತಿ ಹೆಚ್ಚು ಕಿರುಕುಳ ನೀಡಿದ್ದಾರೆ. 2 ಬಾರಿ ನನ್ನ ಕಂಪನಿಯ ಷೇರುಗಳನ್ನು ಜಪ್ತಿ ಮಾಡಿದರು. ಇದರಿಂದ ನನ್ನ ಮೈಂಡ್ ಟ್ರೀ ಕಂಪನಿಯ ಷೇರು ಮಾರಾಟ ಮಾಡಲು ಸಮಸ್ಯೆಯಾಯಿತು. ಅದಾದ ಬಳಿಕೆ ಕಾಫಿ ಡೇ ಷೇರುಗಳ ಮೇಲೆ ಕಣ್ಣು ಬಿತ್ತು. ಆದಾಯ ತೆರಿಗೆ ಇಲಾಖೆಯಿಂದ ನಿರಂತರವಾಗಿ ನನಗೆ ಕಿರುಕುಳ ನೀಡಲಾಯಿತು ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos