ಮುಂಬೈ: ವಿಶ್ವದಾದ್ಯಂತ ಇರುವ ಮಹಾತ್ಮಾ ಗಾಂಧೀಜಿ ಪ್ರತಿಮೆಗಳನ್ನು ತೆಗೆದುಹಾಕಬೇಕು ಮತ್ತು ನೋಟುಗಳಿಂದ ಸಹ ಅವರ ಭಾವಚಿತ್ರವನ್ನು ತೆಗೆಯಬೇಕು ಎಂದು ಮುಂಬೈ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಮಾಡಿರುವ ಟ್ವೀಟ್ ವಿವಾದ ಸೃಷ್ಟಿಸಿದೆ.
ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರ ಹೆಸರಿನಲ್ಲಿರುವ ದೇಶದ ಸಂಸ್ಥೆಗಳು ಮತ್ತು ರಸ್ತೆಗಳಿಗೆ ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದ ಅವರು, ಮಹಾತ್ಮಾ ಗಾಂಧಿಯನ್ನು ನಾಥೂರಾಮ್ ಗೋಡ್ಸೆ ಕೊಂದಿದ್ದು ಒಳ್ಳೆಯದೇ ಆಯಿತು ಎಂದಿದ್ದರು.
ಮಹಾತ್ಮಾ ಗಾಂಧಿಯವರನ್ನು ತೆಗಳಿ ವಿವಾದಾತ್ಮಕ ಟ್ವೀಟ್ ಮಾಡಿ ನಾಥೂರಾಮ್ ಗೋಡ್ಸೆಯವರನ್ನು ವೈಭವೀಕರಿಸಿದ್ದಕ್ಕೆ ನಿಧಿ ಚೌಧರಿಯವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಎನ್ ಸಿಪಿ ಒತ್ತಾಯಿಸಿದೆ.
ಮಹಾತ್ಮಾ ಗಾಂಧಿಯವರ ಮೃತದೇಹದ ಫೋಟೋ ಹಾಕಿ ಮೇ 17ರಂದು ಮಾಡಿದ್ದ ಟ್ವೀಟ್ ನಲ್ಲಿ ನಿಧಿ ಚೌಧರಿ, 150ನೇ ಜಯಂತಿಯನ್ನು ಅದ್ವಿತೀಯವಾಗಿ ಆಚರಿಸುವುದರಲ್ಲಿ ಏನಿದೆ, ಏನಾಗುತ್ತಿದೆ ನಮ್ಮ ದೇಶದಲ್ಲಿ, ಭಾರತದ ಕರೆನ್ಸಿಗಳು, ಪ್ರತಿಮೆಗಳಿಂದ ಮಹಾತ್ಮಾ ಗಾಂಧಿಯವರ ಭಾವಚಿತ್ರವನ್ನು ತೆಗೆದುಹಾಕಲು ಇದು ಸರಿಯಾದ ಸಮಯ, ಅವರ ಹೆಸರಿನಲ್ಲಿರುವ ಶಿಕ್ಷಣ ಸಂಸ್ಥೆಗಳು, ರಸ್ತೆಗಳಿಗೆ ಮರು ನಾಮಕರಣ ಮಾಡಬೇಕು. ಅದು ನಿಜಕ್ಕೂ ನಮ್ಮ ಕಡೆಯಿಂದ ಮಾಡಬಹುದಾದ ನಿಜವಾದ ಗೌರವ, 1948ರ ಜನವರಿ 30ಕ್ಕೆ ಗೋಡ್ಸೆಯವರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಎನ್ ಸಿಪಿ ನಾಯಕ ಜಿತೇಂದ್ರ ಔಹಾದ್ ಚೌಧರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ವಿವಾದ ಸೃಷ್ಟಿಯಾದ ಬಳಿಕ ಪ್ರತಿಕ್ರಿಯಿಸಿರುವ ನಿಧಿ ಚೌಧರಿ, ನನ್ನ ಟ್ವೀಟ್ ನ್ನು ತಪ್ಪಾಗಿ ಅರ್ಥೈಸಿದವರು ನನ್ನ ಟೈಮ್ ಲೈನ್ ನೋಡಬೇಕು. ಕಳೆದ ಕೆಲವು ತಿಂಗಳಿನಿಂದ ನಾನು ಮಾಡಿರುವ ಟ್ವೀಟ್ ಗಳಿಗೆ ಸ್ವಯಂ ವಿವರಣೆ ನೀಡಿದ್ದೇನೆ. ಕಟುವಾಗಿ ಟೀಕಿಸಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿರುವುದಕ್ಕೆ ನನಗೆ ತೀವ್ರ ದುಃಖವಾಗುತ್ತಿದೆ ಎಂದಿದ್ದಾರೆ.