ನೆಲ್ಲೂರು: ಆಟೋ ಮೇಲಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಸ್ಟಿಕ್ಕರ್ ವೊಂದು ಕೊಲೆ ಪ್ರಕರಣವನ್ನು ಬೇಧಿಸಲು ನೆಲ್ಲೋರ್ ಪೊಲೀಸರಿಗೆ ನೆರವಾದ ಕುತೂಹಲಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಹಣ ಹಾಗೂ ಚಿನ್ನದಾಸೆಗೆ ಖಾಸಗಿ ಶಾಲೆಯೊಂದರಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದ ರಾಮಲಿಂಗಾಪುರ ನಿವಾಸಿ 45 ವರ್ಷದ ಮಹಿಳೆ ಬೊಂಡಿಲಿ ನಿರ್ಮಲಾ ಬಾಯಿ ಅವರನ್ನು ಕೊಲೆ ಮಾಡಿದ್ದ ಆಟೋ ಚಾಲಕ ರಾಮಸ್ವಾಮಿಯನ್ನು ಬಂಧಿಸಲು ಆರೋಪಿಯ ಆಟೋ ಮೇಲಿದ್ದ ರಜನಿಕಾಂತ್ ಅವರ ಸ್ಟಿಕ್ಕರ್ ಪೊಲೀಸರಿಗೆ ನೆರವಾಗಿದೆ.
ಕೊಲೆ ನಡೆದ ಮನೆಯ ಹೊರಗಿದ್ದ ಸಿಸಿಟಿವಿಯನ್ನು ಪೊಲೀಸರು ಪರಿಶೀಲಿಸಿದ್ದು, ಅದರಲ್ಲಿ ಕೊಲೆಗೂ ಮುಂಚೆ ಕಾಣಿಸಿದ್ದ ಆಟೋರಿಕ್ಷಾದ ಮೇಲಿನ ರಜನಿಕಾಂತ್ ಸ್ಟಿಕ್ಕರ್ ಇರುವುದನ್ನು ಪತ್ತೆ ಹಚ್ಚಿ, ಅದರ ಜಾಡು ಹಿಡಿದು ಆರೋಪಿ ರಾಮಸ್ವಾಮಿ ಅಲಿಯಾಸ್ ವೇಮಸನಿ ಶ್ರೀಕಾಂತ್ ಅಲಿಯಾಸ್ ರಜನಿಕಾಂತ್(22)ನನ್ನು ಪೊಲೀಸರು ಬಂಧಿಸಿದ್ದಾರೆ.
ನಿರ್ಮಲಾ ಅವರ ಪತಿ ಮೂರು ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಅವರ ಪುತ್ರಿ ತಿರುಪತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದರೆ, ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಒಂಟಿ ಮಹಿಳೆಯನ್ನು ಟಾರ್ಗೆಟ್ ಮಾಡಿದ ಆಟೋ ಚಾಲಕ ರಾಮಸ್ವಾಮಿ, ನಿರ್ಮಲಾ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ 1000 ಕ್ಕೂ ಹೆಚ್ಚು ಆಟೋಗಳನ್ನು ತಪಾಸಣೆ ನಡೆಸಿದ್ದರು.
ಜೂನ್ 3ರಂದು ಅಂತಿಮವಾಗಿ ಈ ಆಟೋ ನೆಲ್ಲೂರ್ ನ ಮುತ್ತುಕೂರ್ ರಸ್ತೆಯ ಅಪೋಲೋ ಆಸ್ಪತ್ರೆ ಜಂಕ್ಷನ್ ನಲ್ಲಿ ಪತ್ತೆಯಾಗಿತ್ತು. ವಿಚಾರಣೆ ನಡೆಸಿದಾಗ ಚಾಲಕ ರಾಮಸ್ವಾಮಿ ತನ್ನ ಕೃತ್ಯ ಒಪ್ಪಿಕೊಂಡಿದ್ದಾನೆ.