ನವದೆಹಲಿ: ಬಿಜೆಪಿ ಹಿರಿಯ ನಾಯಕ , ಮಾಜಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ತಮ್ಮ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸುತ್ತಿದ್ದು, ತಮಗೆ ಒದಗಿಸಿದ್ದ ಸರ್ಕಾರಿ ಕಾರುಗಳನ್ನು ಹಿಂದಿರುಗಿಸಿದ್ದು, ಭದ್ರತಾ ಸಿಬ್ಬಂದಿಯನ್ನು ಕಡಿತಗೊಳಿಸಿಕೊಂಡಿದ್ದಾರೆ.
ತಮ್ಮ ಖಾಸಗಿ ಸಿಬ್ಬಂದಿಯ ಭಾಗವಾಗಿದ್ದ ಸರ್ಕಾರಿ ಅಧಿಕಾರಿಗಳನ್ನು ತಮ್ಮ ಮೂಲ ಸ್ಥಳಗಳಿಗೆ ವಾಪಸ್ಸು ಕಳುಹಿಸಿದ್ದಾರೆ.
ಬಾಕಿ ಉಳಿಸಿಕೊಂಡಿರುವ ನೀರು, ವಿದ್ಯುತ್ ಹಾಗೂ ದೂರವಾಣಿ ಸೇವೆಯ ಬಿಲ್ಲುಗಳನ್ನು ಪಾವತಿಸುವಂತೆ ತಮ್ಮ ಸಿಬ್ಬಂದಿಗೆ ಸೂಚನೆ ನೀಡಿದ್ದು, ನಿತ್ಯ ತಮ್ಮ ಮನೆಗೆ ಪೂರೈಸಲಾಗುತ್ತಿದ್ದ 25 ದಿನ ಪತ್ರಿಕೆಗಳನ್ನು ನಿಲ್ಲಿಸಿದ್ದಾರೆ.
ಅರುಣ್ ಜೇಟ್ಲಿ ಅವರು ದಕ್ಷಿಣ ದೆಹಲಿಯಲ್ಲಿರುವ ತಮ್ಮ ಸ್ವಂತ ಮನೆಗೆ ಸ್ಥಳಾಂತರಗೊಳ್ಳಲಿದ್ದಾರೆ. ಆರೋಗ್ಯ ಕಾರಣಗಳಿಗಾಗಿ ಸರ್ಕಾರಿ ಬಂಗಲೆ ತೊರೆಯಲು ಕುಟುಂಬ ವರ್ಗ ಬಯಸಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಸಂಸದರು, ಲೋಕಸಭೆ ವಿಸರ್ಜನೆಗೊಂಡ ತಿಂಗಳೊಳಗೆ ವಾಸವಾಗಿದ್ದ ಸರ್ಕಾರಿ ನಿವಾಸ ತೆರವುಗೊಳಿಸಬೇಕು ಎಂಬ ಸುಪ್ರಿಂ ಕೋರ್ಟ್ ಆದೇಶವನ್ನು, ಸರ್ವೋಚ್ಛ ನ್ಯಾಯಾಲಯದ ಹಿರಿಯ ವಕೀಲರೂ ಆಗಿರುವ ಜೇಟ್ಲಿ ಅಕ್ಷರಶಃ ಪಾಲಿಸಲು ಮುಂದಾಗಿದ್ದಾರೆ.
ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಪುಟ್ಟ ಸರ್ಕಾರಿ ಬಂಗಲೆಗೆ ಸ್ಥಳಾಂತರಗೊಳ್ಳಬೇಕು ಎಂಬುದು ಜೇಟ್ಲಿ ಅವರ ಬಯಕೆಯಾಗಿದೆ.
ಮುಂದಿನ ನವೆಂಬರ್ ವೇಳೆಗೆ ಕೇಂದ್ರ ಮಂತ್ರಿ ಮಂಡಲ ಸೇರ್ಪಡೆಯಾಗಬಹುದೆಂಬ ಆಶಯವನ್ನು ಜೇಟ್ಲಿ ಅವರು ಹೊಂದಿದ್ದು, ಆನಾರೋಗ್ಯದಿಂದ ಚೇತರಿಸಿಕೊಳ್ಳಲು ನಾಲ್ಕು ತಿಂಗಳ ವಿಶ್ರಾಂತಿಯಲ್ಲಿದ್ದಾರೆ.