ದೇಶ

ಸಂಸತ್ತಿನಲ್ಲಿ ಸಹಕಾರಕ್ಕಾಗಿ ಸೋನಿಯಾ ಗಾಂಧಿ ಭೇಟಿ ಮಾಡಿದ ಬಿಜೆಪಿ ಸಚಿವರು

Nagaraja AB
ನವದೆಹಲಿ: ಜೂನ್ 17ರಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಸುಗಮ ಕಾರ್ಯಕಲಾಪಕ್ಕೆ ಸಹಕಾರ ಕೋರುವ ನಿಟ್ಟಿನಲ್ಲಿ ಕಾಂಗ್ರೆಸ್ ಸಂಸದೀಯ ನಾಯಕಿ ಸೋನಿಯಾ ಗಾಂಧಿ ಅವರನ್ನು ಬಿಜೆಪಿಯ ನಾಯಕರು  ಇಂದು ಭೇಟಿ ಮಾಡಿದರು.
ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್, ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ ವಾಲ್ ಅವರೊಂದಿಗೆ ಸಂಸದೀಯ ವ್ಯವಹಾರಗಳ ಸಚಿವ  ಪ್ರಲ್ದಾದ್ ಜೋಶಿ ನವ ದೆಹಲಿಯಲ್ಲಿರುವ ಜನಪಥ್ 10ರ ನಿವಾಸದಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದರು.
ಸೋನಿಯಾ ಗಾಂಧಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತೋಮರ್, ಸಂಸತ್ತಿನಲ್ಲಿ ಸುಗಮ ಕಾರ್ಯಕಲಾಪ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಸಹಕಾರಕ್ಕಾಗಿ ಪ್ರತಿ ಪಕ್ಷಗಳ ಎಲ್ಲಾ ನಾಯಕರೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಜೂನ್ 5 ರಂದು ರಾಜ್ಯಸಭೆಯಲ್ಲಿನ ಪ್ರತಿಪಕ್ಷ ನಾಯಕ ಗುಲಾಂ ನಬಿ ಅಜಾದ್ ಅವರನ್ನು ಸಚಿವರಾದ ಮೇಘವಾಲ್ ಹಾಗೂ ವಿ. ಮುರಳೀಧರನ್  ಭೇಟಿ ಮಾಡಿದ್ದರು. 
ಸುಗಮ ಕಾರ್ಯಕಲಾಪ ಹಿನ್ನೆಲೆಯಲ್ಲಿ ಸಹಕಾರಕ್ಕಾಗಿ ಲೋಕಸಭಾ ಅಧಿವೇಶನಕ್ಕೂ ಮುನ್ನಾ ದಿನ ಜೂನ್ 16 ರಂದು ಸಂಸತ್ತಿನಲ್ಲಿ ಸರ್ಕಾರ ಎಲ್ಲಾ ಪಕ್ಷಗಳ ಸಭೆ ನಡೆಸಲಿದೆ ಎಂಬುದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.
ನೂತನ ಸಂಸತ್ತಿನ ಪ್ರಥಮ ಅಧಿವೇಶನ ಜುಲೈ 17ರಿಂದ ಜುಲೈ 26ರವರೆಗೆ ನಡೆಯಲಿದ್ದು, ಜುಲೈ 5ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಲಿದೆ. 
SCROLL FOR NEXT