ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ-1 ಸರ್ಕಾರದ ದೇಶಾದ್ಯಂತ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಯಶಸ್ವಿಯಾಗಿದೆ ಎಂದು ಹೇಳಿತ್ತು.
ಆದರೆ ಬಲ್ ರಾಮ್ ಪುರ ಜಿಲ್ಲೆಯ ತ್ರಿಶೂಲಿ ಗ್ರಾಮಸ್ಥರು ಕಳೆದ 7 ದಶಕಗಳಿಂದ ಕತ್ತಲೆಯಲ್ಲೇ ಜೀವನ ಕಳೆಯುತ್ತಿದ್ದಾರೆ. ಈ ಗ್ರಾಮದಲ್ಲಿ ವಿದ್ಯುತ್ ಕಂಬಗಳಿದ್ದರೂ ಸಹ ಕತ್ತಲೆಯಲ್ಲೇ ಜೀವನ ಕಳೆಯುವಂತಾಗಿದೆ ಎಂಬುದು ಇಲ್ಲಿನ ಜನರ ಅಳಲಾಗಿದೆ.
ತ್ರಿಶೂಲಿ ಗ್ರಾಮದಲ್ಲಿ 100 ಮನೆಗಳಿದ್ದು, ಜಿಲ್ಲಾಧಿಕಾರಿಗಳಿಗೆ ವಿದ್ಯುತ್ ಪೂರೈಕೆ ಕುರಿತಂತೆ ಪತ್ರ ಬರೆದಿದ್ದಾರೆ. ಈಗಲೂ ಈ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಲಾಟೀನು ದೀಪವೇ ಆಧಾರ ಎಂದರೆ ನೀವು ನಂಬಬೇಕು. ಲಾಟೀನು ದೀಪ ಉರಿಸುವುದಕ್ಕೂ ಸೀಮೆ ಎಣ್ಣೆ ಪೂರೈಕೆ ಕೊರತೆ ಉಂಟಾಗಿದ್ದು, ಕೆಲವೊಮ್ಮೆ ಕಟ್ಟಿಗೆಯಿಂದ ದೀಪ ಉರಿಸಲಾಗುತ್ತದೆ ಎಂದು ಗ್ರಾಮದ ಹಿರಿಯ ವ್ಯಕ್ತಿ ರಾಮೇಶ್ವರ್ ಪಾಲ್ ಹೇಳಿದ್ದಾರೆ.
ಈ ಹಿಂದೆ ಬಲ್ ರಾಮ್ ಪುರ ಜಿಲ್ಲೆಯ ಜನತೆ ನೀರಿನ ಕೊರತೆ ಬಗ್ಗೆಯೂ ದೂರು ನೀಡಿದ್ದರು. ಒಂದು ಗ್ರಾಮದ ಶೇ.10 ರಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕವಿದ್ದು, ಶಾಲೆ, ಪಂಚಾಯತ್ ಕಚೇರಿ, ಆರೊಗ್ಯ ಕೇಂದ್ರ, ಸಮುದಾಯ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕವಿದ್ದರೆ ಅಂತಹ ಗ್ರಾಮವನ್ನು ವಿದ್ಯುತೀಕರಣಗೊಂಡ ಗ್ರಾಮವೆಂದು ಪರಿಗಣಿಸಲಾಗುತ್ತದೆ. ಹೀಗಾಗಿಯೇ ಶೇ.100 ರಷ್ಟಿ ವಿದ್ಯುತ್ ಸಂಪರ್ಕ ಗುರಿಯನ್ನು ದಾಟಿದ್ದರೂ ಈ ವರೆಗೂ 31 ಮಿಲಿಯನ್ ಮನೆಗಳಿಗೆ ವಿದ್ಯುತ್ ಸಂಪರ್ಕ ದೊರೆತಿಲ್ಲ.