ಭೋಪಾಲ್: ಕಳೆದ ಲೋಕಸಭೆ ಚುನಾವಣೆಯಲ್ಲಿ ಭೋಪಾಲ್ ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ ಸಿಂಗ್ ಸೋತಿದ್ದು ಇದೀಗ ಅವರ ಗೆಲುವಿಗಾಗಿ ಹೋಮ, ಹವನ ನಡೆಸಿದ್ದ ಸ್ವಯಂಗೊಷಿತ ದೇವಮಾನವ ವೈರಾಗ್ಯಾನಂದ ಸ್ವಾಮೀಜಿ ಅಲಿಯಾಸ್ ಮಿರ್ಚಿ ಬಾಬಾ ತಾವು ಈ ಹಿಂದೆ ಮಾತುಕೊಟ್ಟಂತೆ "ಆತ್ಮಾಹುತಿ" ಮಾಡಿಕೊಳ್ಳುವುದಾಗಿ ಹೇಳೀದ್ದಾರೆ.
"ಚುನಾವಣೆಯಲ್ಲಿ ದಿಗ್ವಿಜಯ ಸಿಂಗ್ ಸೋತರೆ ತಾನು ಜಲಸಮಾಧಿಯಾಗುವ ಮೂಲಕ ಆತ್ಮಾಹುತಿ ಮಾಡಿಕೊಳ್ಳುತ್ತೇನೆ ಎಂದಿದ್ದು ಇದೀಗ ದಿಗ್ವಿಜಯ ಸಿಂಗ್ ಸೋತಿದ್ದಾರೆ, ಹಾಗಾಗಿ ನಾನು "ಆತ್ಮಾಹುತಿ" ಮಾಡಿಕೊಳ್ಳಲು ಅನುಮತಿ ಕೊಡಿ" ಎಂದು ಸ್ವಾಮೀಜಿ ಭೋಪಾಲ್ ಜಿಲ್ಲಾಧಿಕಾರಿಗಳಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.
"ನಾನು ಜಲಸಮಾಧಿಯಾಗಲು ಬಯಸುತೇನೆ, ಜೂ.16ರ ಮಧ್ಯಾಹ್ನ 2.11ರ ಸಮಯ ಜಲ ಸಮಾಧಿಗೆ ಪ್ರಶಸ್ತವಾಗಿದೆ.ಹೀಗಾಗಿ ಆ ಸಮಯದಲ್ಲಿ ನನ್ನ ಮಾತನ್ನು ಉಳಿಸಿಕೊಳ್ಳಲು ಅನುಮತಿ ಕೊಡಿ ಹಾಗೆಯೇ ಜಲಸಮಾಧಿಯಾಗಲು ಸ್ಥಳವನ್ನೂ ಗುರುತಿಸಿ ಕೊಡಿ ಎಂದು ಸ್ವಾಮೀಜಿ ಜಿಲ್ಲಾಧಿಕಾರಿಗಳಲ್ಲಿ ಕೋರಿದ್ದಾರೆ.
ಲೋಕಸಭೆ ಚುನಾವಣೆ ವೇಳೆ ದಿಗ್ವಿಜಯ ಸಿಂಗ್ ಗೆಲುವು ಸಾಧಿಸುವ ಸಲುವಾಗಿ ಮೆಣಸಿನ ಹೋಮ ನಡೆಸಿದ್ದ ಸ್ವಾಮೀಜಿ ಒಂದೊಮ್ಮೆ ದಿಗ್ವಿಜಯ ಸಿಂಗ್ ಸೋತರೆ ನಾನು ಜೀವಂತ ಸಮಾಧಿಯಾಗುವೆ ಎಂದಿದ್ದರು.ಮೇ 1 ರಂದುಸ್ವಾಮೀಜಿ ಯಾಗವು ನಡೆದಿತ್ತು. ಮೇ23 ರಂದು ಚುನಾವಣೆಯ ಫಲಿತಾಂಶದಲ್ಲಿ ದಿಗ್ವಿಜಯ್ ಸಿಂಗ್ ಸಾಧ್ವಿ ಪಜ್ಞಾ ಸಿಂಗ್ ಠಾಕೂರ್ ಅವರ ವಿರುದ್ಧ ಸೋಲುಂಡಿದ್ದರು. ಈ ನಂತರ ಸಾಮಾಜಿಕ ತಾಣಗಳಲ್ಲಿ ಸ್ವಾಮೀಜಿ ಹಾಗೂ ಅವರ ಯಾಗದ ಕುರುತು ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.
ಇನ್ನು ಸ್ವಾಮೀಜಿ ಅರ್ಜಿ ಕುರಿತಂತೆ ಪ್ರತಿಕ್ರಯಿಸಿರುವ ಜಿಲ್ಲಾಧಿಕಾರಿ ತರುನ್ ಪಿಥೊಡೆ, ಅರ್ಜಿ ಸ್ವೀಕರಿಸಲಾಗಿದೆ,ಪೋಲೀಸರಿಗೆ ಮಾಹಿತಿ ನೀಡಿದ್ದೇವೆ. ಆದರೆ ಎಂದಿಗೂ ಈ ಬಗೆಯ ಅನುಮತಿ ನೀಡಲು ಸಾಧ್ಯವಿಲ್ಲ.ಅರ್ಜಿದಾರರಿಗೆ ಈ ವಿಚಾರ ತಿಳಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos