ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವೈದ್ಯರ ಪ್ರತಿಭಟನೆ ಅಂತಿಮ ಘಟ್ಟ ತಲುಪಿದೆ ಎನ್ನುತ್ತಿರುವಾಗಲೇ ಸರ್ಕಾರ ನಡೆಸಿರುವ ಸಂಧಾನ ಪ್ರಯತ್ನ ಕಣ್ಣೊರೆಸುವ ತಂತ್ರಗಾರಿಕೆ ಎಂದು ವೈದ್ಯರು ಕಿಡಿಕಾರಿದ್ದಾರೆ.
ವೈದ್ಯರ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಸಿಎಂ ಮಮತಾ ಬ್ಯಾನರ್ಜಿ ವೈದ್ಯರೊಂದಿಗೆ ಸಂಧಾನ ಸಭೆಗೆ ಮುಂದಾಗಿದ್ದಾರೆಯಾದರೂ, ಸರ್ಕಾರದ ಸಂಧಾನಸಭೆ ಕುರಿತು ವೈದ್ಯರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಆರಂಭದಲ್ಲಿ ಬಂಗಾಳ ಸಚಿವಾಲಯದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿತ್ತಾದರೂ, ಬಳಿಕ ಅಧಿಕಾರಿಗಳು ತಾವು ಹೇಳುವ ಜಾಗದಲ್ಲೇ ಸಂಧಾನಸಭೆ ನಡೆಯಬೇಕು ಎಂದು ಬೇಡಿಕೆ ಇರಿಸಿದ್ದಾರೆ. ಹೀಗಾಗಿ ಸರ್ಕಾರದಿಂದ ಸಂಧಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಸಂಧಾನಕ್ಕೆ ನಾವು ಮೊದಲಿನಿಂದಲೂ ಸಿದ್ಧರಿದ್ದೇವೆ. ಸಂಧಾನಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಅವರು ಒಂದು ಕೈ ನೀಡಿದರು ನಾವು ನಮ್ಮ ಹತ್ತು ಕೈಗಳನ್ನು ಚಾಚಲು ಸಿದ್ಧ. ನಮಗೂ ಕೂಡ ರೋಗಿಗಳಿಗೆ ತೊಂದರೆ ನೀಡಲು ಇಷ್ಟವಿಲ್ಲ. ಆದರೆ ಸರ್ಕಾರದಿಂದ ಸಂಧಾನಕ್ಕೆ ಪ್ರಾಮಾಣಿಕ ಪ್ರಯತ್ನವಾಗುತ್ತಿಲ್ಲ. ಕೇವಲ ಕಣ್ಣೊರೆಸುವ ತಂತ್ರಗಾರಿಕೆಗೆ ನಾವು ಬಗ್ಗುವುದಿಲ್ಲ. ಅಂತೆಯೇ ನಮ್ಮಲ್ಲಿನ ಯಾವುದೇ ವೈದ್ಯರು ಸಚಿವಾಲಯಕ್ಕೆ ಹೋಗಿಲ್ಲ ಎಂದು ಹೇಳಿದ್ದಾರೆ.