ದೇಶ

ಚಂದ್ರಬಾಬು ನಾಯ್ಡುಗೆ ಶಾಕ್‌: ಬಿಜೆಪಿ ಸೇರಿದ ನಾಲ್ವರು ಟಿಡಿಪಿ ರಾಜ್ಯಸಭಾ ಸದಸ್ಯರು

Lingaraj Badiger
ನವದೆಹಲಿ: ತೆಲುಗು ದೇಶಂ ಪಕ್ಷ(ಟಿಡಿಪಿ)ದ ಆರು ರಾಜ್ಯಸಭಾ ಸದಸ್ಯರ ಪೈಕಿ ನಾಲ್ವರು ಗುರುವಾರ ಬಿಜೆಪಿ ಸೇರುವ ಮೂಲಕ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರಿಗೆ ಬಿಗ್ ಶಾಕ್ ನೀಡಿದ್ದಾರೆ.
ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಭಾರಿ ಮುಖಭಂಗ ಅನುಭವಿಸಿದ ಚಂದ್ರಬಾಬು ನಾಯ್ಡು ಅವರಿಗೆ ಪಕ್ಷದ ಸಂಸದರು ಈಗ ಮತ್ತೊಂದು ಶಾಕ್‌ ನೀಡಿದ್ದು, ಟಿಡಿಪಿಯ ರಾಜ್ಯಸಭಾ ಸದಸ್ಯರಾದ ವೈ.ಎಸ್‌. ಚೌಧರಿ, ಟಿಜಿ ವೆಂಕಟೇಶ್‌, ಸಿಎಂ ರಮೇಶ್‌ ಹಾಗೂ ಟಿಜಿ ವೆಂಕಟೇಶ್ ಅವರು ಇಂದು ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದರು. 
ಉಳಿದ ಇನ್ನು ಇಬ್ಬರು ಟಿಡಿಪಿ ರಾಜ್ಯಸಭಾ ಸದಸ್ಯರಾದ ತೋಟ ಸೀತಾರಾಮ ಲಕ್ಷ್ಮಿ ಮತ್ತು ಕನಕಮೇದಲ ರವೀಂದ್ರ ಕುಮಾರ್ ಅವರು ಸಹ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದು, ಕೇಸರಿ ಪಡೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇವರಲ್ಲದೇ ಇನ್ನೂ ಕೆಲವರು ಪಕ್ಷ ಬಿಡುವ ಮುನ್ಸೂಚನೆ ನೀಡಿದ್ದು,  ಅವರೂ ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ವೈ. ಎಸ್‌. ಚೌಧರಿ, 2014 ರಲ್ಲಿ ಮೋದಿ ಸಂಪುಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 
2018ರಲ್ಲಿ ಚಂದ್ರಬಾಬು ನಾಯ್ಡು ಎನ್‌ಡಿಎದಿಂದ ಹೊರ ಬಂದ ನಂತರ ಚೌಧರಿ ಸಚಿವ ಸ್ಥಾನಕ್ಕೆ ಗುಡ್‌ ಬೈ ಹೇಳಿದ್ದರು. 
SCROLL FOR NEXT