ಗುವಾಹಟಿ: ಇಲ್ಲೊಬ್ಬ ವ್ಯಕ್ತಿ ತಾನು ಆತ್ಮಹತ್ಯೆ ಮಾಡಿಕೊಳ್ಲಲಿಕ್ಕಾಗಿ ನದಿಗೆ ಹಾರಿದ್ದಾರೆ. ಆದರೆ ದೇವರು ಆತನ ಭವಿಷ್ಯವನ್ನು ಬೇರೆಯದೇ ರೀತಿಯಲ್ಲಿ ಬರೆದಿದ್ದ.
ಲಖ್ಮನ್ ಸ್ವರ್ಗಿಯರಿ ಭಾರೀ ರಭಸದಲ್ಲಿ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ. ಆದರೆ ಆತ ನೀರಿಗೆ ಹಾರಿದ್ದಷ್ಟೆ, ಅವನ ಯೋಗವೇ ಬದಲಾಗಿದೆ. ನೆರೆ, ರಭಸವಾಗಿ ಹರಿಯುತ್ತಿದ್ದ ನದಿಯ ನೀರು ಆತನನ್ನು ಯಾವ ಅಪಾಯವಾಗದಂತೆ ಸುಮಾರು ಹತ್ತು ಗಂಟೆಗಳ ಸಮಯದಲ್ಲಿ 100 ಕಿ.ಮೀ.ದೂರಕ್ಕೆ ಒಯ್ದಿದೆ.
ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಬಕ್ಸಾ ಜಿಲ್ಲೆಯ ತಮುಲ್ಪುರದ ವ್ಯಾಪ್ತಿಯ ಧುಲಾಬಾರಿ ಮೂಲದ ಲಖ್ಮನ್ ತನ್ನ ಹಳ್ಳಿಯಿಂದ ದ್ವಿಚಕ್ರ ವಾಹನದಲ್ಲಿ ಗುವಾಹಟಿಯ ಸರೈಘಾಟ್ ಸೇತುವೆಯನ್ನು ತಲುಪಿದರು. ಅವರು ಪರ್ಸ್, ಮೊಬೈಲ್ ಫೋನ್, ಗುರುತಿನ ದಾಖಲೆಗಳು, ಚಪ್ಪಲಿಗಳು ಸೇರಿದಂತೆ ದ್ವಿಚಕ್ರ ವಾಹನವನ್ನು ಸೇತುವೆಯ ಮೇಲೆ ಬಿಟ್ಟು ಬ್ರಹ್ಮಪುತ್ರಕ್ಕೆ ಹಾರಿದ್ದಾನೆ. ಆದರೆ ನದಿಗೆ ಹಾರಿದ್ದಷ್ಟೆ, ಆತ ನೀರಿನ ಮೇಲೆ ತೇಲುವ ಕಮಲದಂತಹಾ ಗಿಡದ ಎಲೆಗಳು, ಬಾಳೆ ಎಲ್ಲೆಗಳನ್ನು ಕಂಡಿದ್ದಾರೆ. ಮತ್ತು ಅದರ ಸಹಾಯದಿಂದ ಈಜಲು ಪ್ರಾರಂಭಿಸಿದ್ದಾರೆ. ರಾತ್ರಿಯಿಡೀ ಹತ್ತು ಗಂಟೆಗಳ ಕಾಲ ಈಜಿದ ನಂತರ, ಮರುದಿನ ಬೆಳಿಗ್ಗೆ ಕೆಳಗಿನ ಅಸ್ಸಾಂಬಾರ್ಪೆಟಾ ಜಿಲ್ಲೆಯ ಬೋಹೊರಿಯಲ್ಲಿ ದೋಣಿಗಾರರು ಈತನನ್ನು ರಕ್ಷಿಸಿದ್ದಾರೆ.
ಕಲಾಚಂದ್ ಅಲಿ ಎಂಬ ದೋಣಿ ನಡೆಸುವಾತ ದೋಣಿಯಲ್ಲಿ ಗರ್ಭಿಣಿಯನ್ನು ಸಾಗಿಸುತ್ತಿದ್ದ ವೇಳೆ ಯಾವುದೇ ಬಟ್ಟೆಗಳಿಲ್ಲದೆ ಲಖ್ಮನ್ ನನ್ನು ಕಂಡಿದ್ದಾನೆ. “ನಾನು ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆ. ಇದ್ದಕ್ಕಿದ್ದಂತೆ, ಯಾರೋ ಸಹಾಯಕ್ಕಾಗಿ ಕಿರುಚಿಕೊಂಡದ್ದು ಕೇಳಿದೆ.ನಾನು ಸುತ್ತಲೂ ನೋಡಿದೆ. ಮತ್ತು ಅಂತಿಮವಾಗಿ, ಅವನನ್ನು ಪತ್ತೆ ಮಾಡಿ ದೋಣಿಯನ್ನು ಅವನ ಕಡೆಗೆ ತೆಗೆದುಕೊಂಡು ಅವನನ್ನು ರಕ್ಷಿಸಿದೆ ”ಎಂದು ಅಲಿ ಹೇಳಿದರು.
ಅವರು ನದಿ ತೀರವನ್ನು ತಲುಪಿದ ನಂತರ, ಪೊಲೀಸರಿಗೆ ಮಾಹಿತಿ ನೀಡಲಾಯಿತು ಮತ್ತು ಶೀಘ್ರದಲ್ಲೇ, ಆಂಬ್ಯುಲೆನ್ಸ್ ಬಂದಿತು. ತರುವಾಯ, ನಡುಗುವ ಮತ್ತು ದುರ್ಬಲರಾಗಿದ್ದ ಲಖ್ಮನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಆತನನ್ನು ಪೊಲೀಸರು ಅವರ ಕುಟುಂಬಕ್ಕೆ ಒಪ್ಪಿಸಿದರು.
ಯಾವುದೇ ಕಾರಣಗಳನ್ನು ಉಲ್ಲೇಖಿಸದೆ,ಲಖ್ಮನ್ ತಮ್ಮ ಜೀವನವನ್ನು ಕೊನೆಗೊಳಿಸಲು ಬಯಸಿದ್ದಾಗಿ ಪೋಲೀಸರಿಗೆ ಹೇಳಿದ್ದಾನೆ. "ನಾನು ಸಾಯಲು ಬಯಸಿದ್ದೆ ಮತ್ತು ನಾನು ನದಿಗೆ ಧುಮುಕಿದೆ ಹಾಗಿದ್ದರೂ ನಾನು ಸಾಯಲು ಆಗಲಿಲ್ಲ. ನಾನು ನೀರಿನಲ್ಲಿದ್ದಾಗ, ನಾನು ಬದುಕಲು ಬಯಸಿದ್ದೆ" ಅವನು ಹೇಳಿದ್ದಾನೆ.