ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಟಿಗುವಾದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ತಜ್ಞ ವೈದ್ಯರೊಂದಿಗೆ ಏರ್ ಅಂಬ್ಯುಲೆನ್ಸ್ ಒದಗಿಸುವುದಾಗಿ ಜಾರಿ ನಿರ್ದೇಶನಾಲಯ ಹೇಳಿದೆ
ಅನಾರೋಗ್ಯದ ಕಾರಣದಿಂದಾಗಿ ಭಾರತಕ್ಕೆ ಮರಳಲು ಆಗಲ್ಲ ಎಂದು ಮೆಹುಲ್ ಚೋಕ್ಸಿ ಅಪಿಢವಿಟ್ ಸಲ್ಲಿಸಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಈ ರೀತಿಯಲ್ಲಿ ಹೈಕೋರ್ಟ್ ಗೆ ಪ್ರತಿ ಅಪಿಢವಿಟ್ ಸಲ್ಲಿಸಿದೆ.
ಅನಾರೋಗ್ಯದ ನೆಪವೊಡ್ಡಿ ಮೆಹುಲ್ ಚೋಕ್ಸಿ ನ್ಯಾಯಾಂಗ ಪ್ರಕ್ರಿಯೆಯಿಂದ ದೂರ ಉಳಿಯಲು ಪ್ರಯತ್ನಿಸುತ್ತಿದ್ದಾರೆ. ಆಂಟಿಗುವಾದಿಂದ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ತಜ್ಞ ವೈದ್ಯರೊಂದಿಗೆ ಏರ್ ಅಂಬ್ಯುಲೆನ್ಸ್ ಒದಗಿಸಲು ಸಿದ್ಧವಿರುವುದಾಗಿ ಇಡಿ ತನ್ನ ಅಫಿಡವಿಟ್ ನಲ್ಲಿ ತಿಳಿಸಿದೆ.
ಸುಮಾರು 13 ಸಾವಿರ ಕೋಟಿ ರೂ. ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ತನಿಖೆಗೆ ಚೋಕ್ಸಿ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರೀಯ ತನಿಖಾ ದಳ ಹೇಳಿದೆ.
ತನಿಖೆ ವೇಳೆ ಜಾರಿ ನಿರ್ದೇಶನಾಲಯ ಚೋಕ್ಸಿಗೆ ಸೇರಿದ 2100 ಕೋಟಿ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಆದರೆ, 6129 ಕೋಟಿ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಚೋಕ್ಸಿ ಹೇಳುತ್ತಿದ್ದು, ಆತ ಭಾರತದಿಂದ ಪಲಾಯನ ಮಾಡುವ ಮುನ್ನವೇ ತನ್ನೆಲ್ಲಾ ಆಸ್ತಿಯನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದ ಬಗ್ಗೆ ದಾಖಲೆಗಳನ್ನು ಇಡಿ ನಿರ್ವಹಣೆ ಮಾಡಿದೆ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.
ಮೆಹುಲ್ ಚೋಕ್ಸಿ ವಿರುದ್ಧ ಜಾಮೀನು ರಹಿತ ವಾರೆಂಟ್ ಹಾಗೂ ಇಂಟರ್ ಪೋಲ್ ಪೊಲೀಸರಿಂದ ರೆಡ್ ನೋಟಿಸ್ ನೀಡಲಾಗಿದ್ದರೂ ಆತ ಭಾರತಕ್ಕೆ ಮರಳುತ್ತಿಲ್ಲ. ತನಿಖೆಗೂ ಸಹಕರಿಸುತ್ತಿಲ್ಲ ಎಂದು ಇಡಿ ತಿಳಿಸಿದೆ.