ದೇಶ

ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್ ಗೆ ಸ್ವದೇಶಾಭಿಮಾನಿ ಕೇಸರಿ ಪುರಸ್ಕಾರ

Sumana Upadhyaya
ತಿರುವನಂತಪುರಂ: ಹಿರಿಯ ಪತ್ರಕರ್ತ ಮತ್ತು ಅಂಕಣಕಾರ, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಅಂಕಣ ಸಲಹೆಗಾರ ಟಿಜೆಎಸ್ ಜಾರ್ಜ್ ಅವರನ್ನು 2017ನೇ ಸಾಲಿನ ಸ್ವದೇಶಾಭಿಮಾನಿ ಕೇಸರಿ ಮಾಧ್ಯಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕೇರಳ ಸರ್ಕಾರ ಹಿರಿಯ ಪತ್ರಕರ್ತರಿಗೆ ನೀಡುವ ಅತ್ಯುನ್ನತ ಗೌರವ ಇದಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜುಲೈ 1ರಂದು ಠಾಗೋರ್ ಥಿಯೇಟರ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು, ಸ್ಮರಣಿಕೆ ಮತ್ತು ಕನಯಿ ಕುನಿರಾಮನ್ ಅವರ ಮೂರ್ತಿಯನ್ನು ಒಳಗೊಂಡಿರುತ್ತದೆ. 
ಪಾರ್ವತಿ ದೇವಿ, ಎನ್ ಪಿ ರಾಜೇಂದ್ರನ್ ಮತ್ತು ಖ್ಯಾತ ಮಾಧ್ಯಮ ವಿಶ್ಲೇಷಕ ಸೆಬಾಸ್ಟಿಯನ್ ಪೌಲ್ ಅವರ ನೇತೃತ್ವದ ಆಯ್ಕೆ ಸಮಿತಿ ಟಿಜೆಎಸ್ ಜಾರ್ಜ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ತಮ್ಮ ಸುದೀರ್ಘ 70 ದಶಕಗಳ ಪತ್ರಿಕಾರಂಗ ವೃತ್ತಿಯಲ್ಲಿ ಟಿಜೆಎಸ್ ಜಾರ್ಜ್, ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಸೇರಿದ ಮೊದಲ ಸಂಪಾದಕರಾಗಿದ್ದಾರೆ. ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳಲ್ಲಿ ಸುಮಾರು 20 ಪುಸ್ತಕಗಳನ್ನು ಬರೆದಿದ್ದಾರೆ. ಟಿಜೆಎಸ್ ಜಾರ್ಜ್ ಅವರಿಗೆ 2011 ರಲ್ಲಿ ಕೇಂದ್ರ ಸರ್ಕಾರದ ಪದ್ಮ ಭೂಷಣ ಪುರಸ್ಕಾರ ಸಂದಿದೆ.
ಟಿಜೆಎಸ್ ಜಾರ್ಜ್ ಅವರು ಪ್ರತಿ ಭಾನುವಾರ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಬರೆಯುವ ಪಾಯಿಂಟ್ ಆಫ್ ವ್ಯೂ ಅಂಕಣ ಜನಪ್ರಿಯವಾಗಿದೆ.
SCROLL FOR NEXT