ದೇಶ

27 ವರ್ಷಗಳ ಹಳೆಯ ಪ್ರಕರಣ: ಕಾಶ್ಮೀರದಲ್ಲಿ ಹಿರಿಯ ಪತ್ರಕರ್ತನ ಬಂಧನ

Lingaraj Badiger
ಶ್ರೀನಗರ: ಹಿರಿಯ ಪತ್ರಕರ್ತ ಗುಲಾಮ್ಜೀಲಾನಿ ಖಾದ್ರಿ ಅವರನ್ನು ಮಂಗಳವಾರ ಶ್ರೀನಗರದ ಅವರ ನಿವಾಸದಲ್ಲಿ ಪೊಲೀಸರು ಬಂಧಿಸಿದ್ದಾರೆ.
27 ವರ್ಷಗಳ ಹಿಂದೆ 1992ರಲ್ಲಿ ಟಾಡಾ ಕಾಯ್ದೆಯಡಿ ದಾಖಾಲಾಗಿದ್ದ ಪ್ರಕರಣ ಸಂಬಂಧ ಬಂಧಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಹಲವು ವ್ಯಕ್ತಿಗಳಿಗಾಗಿ ಪೊಲೀಸರು ಹುಡುಕಾಟನಡೆಸುತ್ತಿದ್ದಾರೆ. ಶ್ರೀನಗರದಿಂದ ಪ್ರಕಟಗೊಳ್ಳುವ ಅತ್ಯಂತ ಹಳೆಯ ಉರ್ದು ಪತ್ರಿಕೆ “ಡೈಲಿ ಆಫಾಕ್”ನ ಪ್ರಕಾಶಕ ಮತ್ತು ಮುದ್ರಣಕಾರರಾಗಿರುವ ಖಾದ್ರಿ (62) ಅವರ ಮನೆಯ ಮೇಲೆ ದಾಳಿ ನಡೆಸಿದ ಅವರನ್ನು ಬಂಧಿಸಲಾಗಿದೆ.
90ರ ದಶಕದ ಆರಂಭದಲ್ಲಿ ಜೆಎಕೆ(ಜಮ್ಮು ಮತ್ತು ಕಾಶ್ಮೀರ) ಸುದ್ದಿಸಂಸ್ಥೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದಲ್ಲಿ ಟಾಡಾ ಕಾಯ್ದೆ ಜಾರಿಯಲ್ಲಿದ್ದಾಗ ಟಾಡಾ ನ್ಯಾಯಾಲಯ 1990 ವಾರೆಂಟ್ ಹೊರಡಿಸಿತ್ತು. ನಂತರ 1995 ರಲ್ಲಿ ಕಾಯ್ದೆಯನ್ನು ರದ್ದುಪಡಿಸಲಾಗಿತ್ತು.
SCROLL FOR NEXT