ಇಂದೋರ್: ಮಹಾನಗರ ಪಾಲಿಕೆ ಅಧಿಕಾರಿಯ ಮೇಲೆ ಬ್ಯಾಟ್ ನಿಂದ ಹಲ್ಲೆ ನಡೆಸಿದ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯ್ ವರ್ಗೀಯ ಅವರ ಪುತ್ರ, ಬಿಜೆಪಿ ಶಾಸಕ ಆಕಾಶ್ ವಿಜಯ್ ವರ್ಗೀಯ ಅವರನ್ನು ಮಧ್ಯ ಪ್ರದೇಶ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಶಾಸಕರು ಅಧಿಕಾರಿ ಮೇಲೆ ಬ್ಯಾಟ್ ನಿಂದ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಆಕಾಶ್ ವಿಜಯ್ ವರ್ಗೀಯ ಮತ್ತು ಇತರೆ 10 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಆಕಾಶ್ ಅವರು, ತಮ್ಮ ಬೆಂಬಲಿಗನೋರ್ವನ ಕಟ್ಟಡ ಕೆಡವಲು ವಿರೋಧ ವ್ಯಕ್ತಪಡಿಸಿದ್ದಾರೆ.
ಕಟ್ಟಡ ಕೆಡವದಂತೆ ಆಕಾಶ್ ಆಜ್ಞೆ ನೀಡಿದರೂ, ಮಾತು ಕೇಳದೇ ಇದ್ದ ಅಧಿಕಾರಿ ವಿರುದ್ಧ ಕೆಂಡಾಮಂಡಲರಾದ ಶಾಸಕ ಆಕಾಶ್, ಕ್ರಿಕೆಟ್ ಬ್ಯಾಟ್ನಿಂದ ಹೊಡೆದಿದ್ದರು. ಬಳಿಕ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದ ಶಾಸಕ, ಬಿಜೆಪಿಯಲ್ಲಿ ಮೊದಲು ಮಾತಿನಿಂದ ಹೇಳುತ್ತೇವೆ ನಂತರ ಕೈಗೆ ಬ್ಯಾಟ್ ತೆಗೆದುಕೊಳ್ಳುತ್ತೇವೆ ಎಂದಿದ್ದರು.