ನವ ಭಾರತದ ಬಗ್ಗೆ ಢಾಳಾಗಿ ಮಾತನಾಡುವ ಬಿಜೆಪಿ ನಾಯಕರಿಗೆ ಮುಜುಗರ ಉಂಟುಮಾಡುವ ರೀತಿಯ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.
ಬಿಜೆಪಿ ಶಾಸಕ ಆಕಾಶ್ ವಿಜಯ್ ವರ್ಗೀಯ ಅವರು ಮಹಾನಗರ ಪಾಲಿಕೆ ಅಧಿಕಾರಿಯನ್ನು ಥಳಿಸಿರುವ ವಿಡಿಯೋ ಸೆರೆಯಾಗಿದೆ.
ಮಹಾನಗರ ಪಾಲಿಕೆಯ ಅಧಿಕಾರಿ ಅತಿಕ್ರಮಣ ವಿರೋಧಿ ಅಭಿಯಾನಕ್ಕಾಗಿ ಇಂದೋರ್ ಗೆ ಆಗಮಿಸಿದ್ದರು. ಈ ವೇಳೆ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯ್ ವರ್ಗೀಯ ಪುತ್ರ ಆಕಾಶ್ ಕ್ರಿಕೆಟ್ ಬ್ಯಾಟ್ ನಿಂದ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ.
ಒತ್ತುವರಿ ವಿರೋಧಿ ಅಭಿಯಾನಕ್ಕೆ ಆಗಮಿಸಿದ್ದ ಅಧಿಕಾರಿ ಗಂಜಿ ಕಾಂಪೌಂಡ್ ಏರಿಯಾದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡವನ್ನು ನೆಲಸಮ ಮಾಡಲು ಮುಂದಾದಾಗ ಈ ಘಟನೆ ನಡೆದಿದೆ. ಘಟನೆ ನಡೆದಿರುವುದು ವರದಿಯಾಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದರು.