ಭೋಪಾಲ್: ಮಹಾನಗರ ಪಾಲಿಕೆ ಅಧಿಕಾರಿಯ ಮೇಲೆ ಬ್ಯಾಟ್ ನಿಂದ ಹಲ್ಲೆ ನಡೆಸಿ ಜೈಲು ಪಾಲಾಗಿದ್ದ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯ್ ವರ್ಗೀಯ ಅವರ ಪುತ್ರ, ಬಿಜೆಪಿ ಶಾಸಕ ಆಕಾಶ್ ವಿಜಯ್ ವರ್ಗೀಯ ಅವರಿಗೆ ಭೋಪಾಲ್ ವಿಶೇಷ ಕೋರ್ಟ್ ಶನಿವಾರ ಜಾಮೀನು ಮಂಜೂರು ಮಾಡಿದೆ.
ಜೂನ್ 26ರಂದು ಇಂದೋರ್ ನಲ್ಲಿ ಪಾಲಿಕೆ ಅಧಿಕಾರಿ ಮೇಲೆ ಬ್ಯಾಟ್ ನಿಂದ ಹಲ್ಲೆ ನಡೆಸಿದ ಶಾಸಕ ಆಕಾಶ್ ವಿಜಯ್ ವರ್ಗೀಯ ಅವರನ್ನು ಪೊಲೀಸರು ಬಂಧಿಸಿದ್ದರು.
ಜಾಮೀನು ಕೋರಿ ಆಕಾಶ್ ವಿಜಯ್ ವರ್ಗೀಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ಕೋರ್ಟ್, 50 ಸಾವಿರ ರೂ. ಬಾಂಡ್ ಮೇಲೆ ಆರೋಪಿಗೆ ಜಾಮೀನು ನೀಡಿದೆ.
ಶಾಸಕ, ಅಧಿಕಾರಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಆಕಾಶ್ ವಿಜಯ್ ವರ್ಗೀಯ ಮತ್ತು ಇತರೆ 10 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಆಕಾಶ್ ಅವರು, ತಮ್ಮ ಬೆಂಬಲಿಗನೋರ್ವನ ಕಟ್ಟಡ ಕೆಡವಲು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಕಟ್ಟಡ ಕೆಡವದಂತೆ ಆಕಾಶ್ ಆಜ್ಞೆ ನೀಡಿದರೂ, ಮಾತು ಕೇಳದೇ ಇದ್ದ ಅಧಿಕಾರಿ ವಿರುದ್ಧ ಕೆಂಡಾಮಂಡಲರಾದ ಶಾಸಕರು, ಕ್ರಿಕೆಟ್ ಬ್ಯಾಟ್ನಿಂದ ಹೊಡೆದಿದ್ದರು.