ದೇಶ

ಹಿಂದಿನ ಬಿಜೆಪಿ ಸರ್ಕಾರ ಅಳ್ವಾರ್ ಹಲ್ಲೆ ಪ್ರಕರಣದ ತನಿಖೆ ನಡೆಸಿದೆ, ವ್ಯತ್ಯಾಸ ಕಂಡುಬಂದರೆ ಮರುತನಿಖೆ: ರಾಜಸ್ಥಾನ ಸಿಎಂ

Lingaraj Badiger
ಜೈಪುರ್: ಎರಡು ವರ್ಷಗಳ ಹಿಂದೆ ರಾಜಸ್ಥಾನದ ಅಳ್ವಾರ್ ನಲ್ಲಿ ಗೋರಕ್ಷಕರಿಂದ ಹಲ್ಲೆಗೊಳಗಾಗಿ ಮೃತಪಟ್ಟ ಪೆಹ್ಲೂ ಖಾನ್ ಮತ್ತು ಆತನ ಇಬ್ಬರು ಗಂಡು ಮಕ್ಕಳ ವಿರುದ್ಧ ಗೋ ಕಳ್ಳಸಾಗಣೆ ಆರೋಪದಡಿ ರಾಜಸ್ಥಾನ ಪೊಲೀಸರು ಶನಿವಾರ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಈ ಹಿಂದಿನ ಬಿಜೆಪಿ ಸರ್ಕಾರ ಅಳ್ವಾರ್ ಹಲ್ಲೆ ಪ್ರಕರಣದ ತನಿಖೆ ನಡೆಸಿದೆ. ಆದರೆ ತನಿಖೆಯಲ್ಲಿ ವ್ಯತ್ಯಾಸ ಕಂಡುಬಂದರೆ ಮರು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಪೆಹ್ಲೂ ಖಾನ್ ಹತ್ಯೆಯನ್ನು ಮೊದಲಿನಿಂದಲೂ ಖಂಡಿಸುತ್ತಾ ಬಂದಿದೆ. ಖಾನ್ ಹಂತಕರಿಗೆ ಶಿಕ್ಷೆಯಾಗಲೇಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಪ್ರಕರಣದ ತನಿಖೆ ನಡೆದಿದೆ ಮತ್ತು ಈಗ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಒಂದು ವೇಳೆ ತನಿಖೆ ಅಸಮಂಜಸವಾಗಿದ್ದರೆ ನಮ್ಮ ಸರ್ಕಾರ ಮರು ತನಿಖೆ ನಡೆಸಲಿದೆ ಎಂದು ರಾಜಸ್ಥಾನ ಸಿಎಂ ವರದಿಗಾರರಿಗೆ ಹೇಳಿದ್ದಾರೆ.
ಹಲ್ಲೆ ಪ್ರಕರಣದ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದ ಸಿಎಂ, ಅವರಿಗೆ ನೀಡುವ ಶಿಕ್ಷೆ ಭವಿಷ್ಯದಲ್ಲಿ ಪಾಠವಾಗಬೇಕು ಮತ್ತು ಯಾವತ್ತೂ ಅಂತಹ ಪ್ರಕರಣ ಮರುಕಳಿಸಬಾರದು ಎಂದಿದ್ದಾರೆ.
ಇನ್ನೂ ಪೊಲೀಸರು ತಮ್ಮ ವಿರುದ್ಧವೇ ಚಾರ್ಜ್ ಶೀಟ್ ಸಲ್ಲಿಸಿದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪೆಹ್ಲೂ ಖಾನ್ ಅವರ ಹಿರಿಯ ಪುತ್ರ ಇರ್ಷಾದ್ ಅವರು, ರಾಜ್ಯದಲ್ಲಿ ಹೊಸ ಕಾಂಗ್ರೆಸ್ ಸರ್ಕಾರ ನಮ್ಮ ವಿರುದ್ಧದ ಪ್ರಕರಣಗಳನ್ನು ಮರು ಪರಿಶೀಲಿಸಿ ಅದನ್ನು ವಾಪಸ್ ಪಡೆಯಬಹುದೆಂಬ ಆಶಾವಾದದಲ್ಲಿ ನಾವಿದ್ದರೆ ಈಗ ನಮ್ಮ ವಿರುದ್ಧವೇ ಚಾರ್ಜ್ ಶೀಟ್ ಸಲ್ಲಿಯಾಗಿದೆ ಎಂದಿದ್ದಾರೆ.
SCROLL FOR NEXT