ನವದೆಹಲಿ/ಸಿಂಗಾಪೂರ್: ಫೆಬ್ರವರಿ 26ರಂದು ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಬಾಲಕೋಟ್ ನ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಯಾವುದೇ ಕಟ್ಟಡ ಧ್ವಂಸವಾಗಿಲ್ಲ. ದಾಳೆ ನಡೆದಿದೆ ಎನ್ನಲಾಗುತ್ತಿರುವ ಕಟ್ಟಡ ಈಗಲೂ ಸುಸಜ್ಜಿತವಾಗಿರುವುದು ಸ್ಯಾಟ್ ಲೈಟ್ ಚಿತ್ರಗಳಿಂದ ಬಹಿರಂಗವಾಗಿದೆ.
ಪಾಕಿಸ್ತಾನದ ಬಾಲಕೋಟ್ ನಲ್ಲಿ ಭಾರತ ವೈಮಾನಿಕ ದಾಳಿ ನಡೆಸಿ, ಸುರಕ್ಷಿತವಾಗಿ ಮರಳಿದ ಬಗ್ಗೆ ಸಾಕಷ್ಟು ಅನುಮಾನ ಹಾಗೂ ಊಹಾಪೋಹಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ದಾಳಿ ನಡೆದ ಆರು ದಿನಗಳ ನಂತರ, ಮಾರ್ಚ್ 4ರಂದು ತೆಗೆದ ಉಪಗ್ರಹ ಚಿತ್ರಗಳನ್ನು ರಾಯಟರ್ಸ್ ಸುದ್ದಿ ಸಂಸ್ಥೆ ಪರಿಶೀಲಿಸಿದ್ದು, ಜೈಶ್ ಗೆ ಸೇರಿದ ಮದರಸಾದ ಆರು ಕಟ್ಟಡಗಳು ಸುಸಜ್ಜಿತವಾಗಿರುವುದು ಸ್ಪಷ್ಟವಾಗಿದೆ.
ಅಮೆರಿಕ ಮೂಲದ ಖಾಸಗಿ ಸ್ಯಾಟ್ ಲೈಟ್ ನಿರ್ವಾಹಕ ಪ್ಲಾನೆಟ್ ಲ್ಯಾಬ್ಸ್ ಇಂಕ್ ಈ ಹೈ ರೆಸಲ್ಯೂಷನ್ ಚಿತ್ರಗಳನ್ನು ನೀಡಿದ್ದು, ಭಾರತ ದಾಳಿ ನಡೆಸಿದೆ ಎನ್ನಲಾಗುತ್ತಿರುವ ಕಟ್ಟಡದ ಚಿತ್ರ ಸ್ಪಷ್ಟವಾಗಿ ಕಾಣುತ್ತಿದೆ.
ಕಟ್ಟಡಗಳ ಮೇಲ್ಛಾವಣಿಗಳಲ್ಲಿ ಯಾವುದೇ ರಂಧ್ರಗಳಿಲ್ಲ, ಗುಂಡಿನ ದಾಳಿ ನಡೆಸಿದ ಅಥವಾ ಸ್ಫೋಟಿಸಿದ ಬಗ್ಗೆ ಯಾವುದೇ ಗುರುತುಗಳಿಲ್ಲ. ಗೋಡೆಗಳು, ಮದ್ರಸಾ ಸುತ್ತಲೂ ಇರುವ ಮರಗಳು ಹಾಗೆಯೇ ಇವೆ. ವೈಮಾನಿಕ ದಾಳಿಯ ಯಾವುದೇ ಚಿಹ್ನೆಗಳು ಚಿತ್ರಗಳಲ್ಲಿ ಇಲ್ಲ. 72 cm(28 Inches) ಅಳತೆಯ ಈ ಫೋಟೋಗಳಲ್ಲಿ ಭಾರತೀಯ ವಾಯುಸೇನೆ ದಾಳಿ ಮಾಡಿತ್ತು ಎನ್ನಲಾದ ಉಗ್ರ ನೆಲೆಗಳು ಸುರಕ್ಷಿತವಾಗಿರುವುದು ಸ್ಪಷ್ಟವಾಗಿದೆ ಎಂದು ಪ್ಲ್ಯಾನೆಟ್ ಲ್ಯಾಬ್ಸ್ ಇಂಕ್ ಹೇಳಿದೆ.
ಇನ್ನು ಸ್ಯಾಟ್ ಲೈಟ್ ಚಿತ್ರಗಳ ಬಗ್ಗೆ ಇ-ಮೇಲ್ ಮೂಲಕ ಕೇಳಿದ ಯಾವುದೇ ಪ್ರಶ್ನೆಗಳಿಗೂ ಭಾರತದ ವಿದೇಶಾಂಗ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯ ಉತ್ತರ ನೀಡಿಲ್ಲ ಎಂದು ರಾಯಟರ್ಸ್ ವರದಿ ಮಾಡಿದೆ.
ಇದಕ್ಕು ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ 300ರಿಂದ 350 ಉಗ್ರರು ಹತರಾಗಿದ್ದಾರೆ, ಕಟ್ಟಡಗಳು ಧ್ವಂಸಗೊಂಡಿವೆ ಎಂದೆಲ್ಲ ಹೇಳಲಾಗಿತ್ತು. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡದಿರುವುದರಿಂದ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಭಾರತದ ಟಾರ್ಗೆಟ್ ಮಿಸ್ ಆಗಿದೆಯಾ?
ಬಾಲಾಕೋಟ್ ಮೇಲೆ ದಾಳಿ ಮಾಡಲು ಮುಂದಾಗಿದ್ದ ವಾಯುಸೇನೆ ಗುರಿ ತಪ್ಪಿ ಬೇರೊಂದು ಪ್ರದೇಶದಲ್ಲಿ ಬಾಂಬ್ ದಾಳಿ ನಡೆಸಿರಬಹದು ಎಂದು ಮಿಡಲ್ ಬರಿ ಇನ್ಸಿಟ್ಯೂಟ್ ಆಫ್ ಇಂಟರ್ ನ್ಯಾಶನಲ್ ಸ್ಟಡೀಸ್ ಮುಖ್ಯಸ್ಥ ಜೆಫ್ರಿ ಲೆವಿಸ್ ಹೇಳಿದ್ದಾರೆ.
ಒಟ್ಟಿನಲ್ಲಿ ಭಾರತ ಸರ್ಕಾರ ಮತ್ತು ವಾಯುಸೇನೆ ಪ್ರತಿಪಾದಿಸುತ್ತಿದ್ದ ಬಾಲಾಕೋಟ್ ದಾಳಿ, ಮತ್ತು ಪ್ಲ್ಯಾನೆಟ್ ಲ್ಯಾಬ್ಸ್ ಇಂಕ್ ಬಿಡುಗಡೆಗೊಳಿಸಿರುವ ಚಿತ್ರಗಳು ಮತ್ತಷ್ಟು ಗೊಂದಲ ಮೂಡಿಸಿರುವುದು ಸುಳ್ಳಲ್ಲ.