ಇಸ್ಲಾಮಾಬಾದ್: ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸಿದ ಬಾಲಕೋಟ್ ನ ಉಗ್ರರ ಅಡಗುತಾಣಗಳಿಗೆ ಭೇಟಿ ನೀಡಲು ಪತ್ರಕರ್ತರಿಗೆ ಪಾಕಿಸ್ತಾನ ಸರ್ಕಾರ ಮತ್ತೆ ಅನುಮತಿ ನಿರಾಕರಿಸಿದೆ.
ಜೈಶ್ - ಇ- ಮೊಹಮ್ಮದ್ ಉಗ್ರ ಸಂಘಟನೆಯ ಮದರಸಾ ಇರುವ ಸ್ಥಳಕ್ಕೆ ಭೇಟಿ ನೀಡಲು ಪಾಕಿಸ್ತಾನ ಸರ್ಕಾರ ರಾಯಟರ್ಸ್ ಸುದ್ದಿಸಂಸ್ಥೆಯ ಪ್ರತಿನಿಧಿಗಳಿಗೆ ಮತ್ತೊಮ್ಮೆ ಅವಕಾಶ ನಿರಾಕರಿಸಿದೆ. ಕಳೆದ 9 ದಿನಗಳಲ್ಲಿ ಮೂರನೇ ಬಾರಿ ಮಾಧ್ಯಮ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ.
ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಲು ಮೂರು ಬಾರಿ ಯತ್ನಿಸಿ ವಿಫಲವಾಗಿದ್ದೇವೆ. ಭದ್ರತಾ ದೃಷ್ಟಿಯಿಂದ ಪಾಕ್ ಸೇನೆಯು ಯಾರಿಗೂ ಸ್ಫೋಟ ಸ್ಥಳಕ್ಕೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ರಾಯಟರ್ಸ್ ವರದಿಗಾರರು ಹೇಳಿದ್ದಾರೆ.
ವೈಮಾನಿಕ ದಾಳಿಯಲ್ಲಿ ಭಾರೀ ಸಂಖ್ಯೆಯ ಜೈಷೆ ಉಗ್ರರು, ತರಬೇತಿದಾರರು, ಉಗ್ರ ಸಂಘಟನೆಯ ಹಿರಿಯ ಕಮಾಂಡರ್ಗಳು, ಜಿಹಾದಿಗಳು ಮೃತಪಟ್ಟಿದ್ದಾರೆ ಎಂದು ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಹೇಳಿದ್ದಾರೆ. ಆದರೆ ದಾಳಿಯಲ್ಲಿ ಯಾವುದೇ ಸಾವು-ನೋವಾಗಿಲ್ಲ. ಕೆಲವು ಪೈನ್ ಮರಗಳು ಮುರಿದಿವೆ ಎಂದು ಪಾಕ್ ವಾದಿಸುತ್ತಿದೆ.