ನವದೆಹಲಿ: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಬಿಹಾರ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ನಿಗದಿಪಡಿಸಿರುವ ಚುನಾವಣಾ ದಿನಾಂಕದ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕ ಫಿರ್ಹಾದ್ ಹಕೀಂ ಅಪಸ್ವರವೆತ್ತಿದ್ದಾರೆ.
ರಂಜಾನ್ ಆಚರಣೆ ಸಂದರ್ಭದಲ್ಲಿ ಮೂರೂ ರಾಜ್ಯಗಳಲ್ಲಿ ಚುನಾವಣೆ ನಿಗದಿಯಾಗಿದೆ. ಲೋಕಸಭಾ ಚುನಾವಣೆ ದಿನಾಂಕ ರಂಜಾನ್ ಆಚರಣೆ ಮಾಡುವವರಿಗೆ ಅಡ್ಡಿಯಾಗಿದೆ ಎಂದು ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಂಜಾನ್ ಉಪವಾಸ ಒಂದು ತಿಂಗಳು ನಡೆಯಲಿದ್ದು, ಈ ಸಂದರ್ಭದಲ್ಲಿಯೇ ಲೋಕಸಭಾ ಚುನಾವಣೆ ಸಹ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಟಿಎಂಸಿ ನಾಯಕ ಹಾಗೂ ಕೋಲ್ಕತ್ತಾ ಮೇಯರ್ ಅಲ್ಪಸಂಖ್ಯಾತರು ಮತಚಲಾವಣೆ ಮಾಡುವುದು ಬಿಜೆಪಿಗೆ ಬೇಕಿಲ್ಲ. ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆ, ಅದನ್ನು ಗೌರವಿಸುತ್ತೇವೆ, ಆಯೋಗದ ಬಗ್ಗೆ ನಾವು ಏನನ್ನೂ ಹೇಳುವುದಿಲ್ಲ. ಆದರೆ 7 ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದ್ದು, ರಂಜಾನ್ ಆಚರಣೆ ವೇಳೆಯಲ್ಲೇ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಅಲ್ಪಸಂಖ್ಯಾತರಿಗೆ ಸಮಸ್ಯೆಯಾಗಲಿದೆ ಎಂದು ಹೇಳಿದ್ದಾರೆ.