ನವದೆಹಲಿ: ಮಯನ್ಮಾರ್ ಗಡಿಯಲ್ಲಿ ಭಾರತೀಯ ಸೇನೆ ನಡೆಸಿರುವ ಜಂಟಿ ಸೇನಾ ಕಾರ್ಯಾಚರಣೆ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಸರ್ಜಿಕಲ್ ಸ್ಚ್ರೈಕ್ ವೇಳೆ ಪಾಕ್ ಮೂಲದ ಉಗ್ರರನ್ನು ಟಾರ್ಗೆಟ್ ಮಾಡಿಕೊಂಡಿದ್ದ ಸೇನೆ ಇದೀಗ ಚೀನಾ ಮೂಲದ ಉಗ್ರರನ್ನು ಟಾರ್ಗೆಟ್ ಮಾಡಿಕೊಂಡು ಮಯನ್ಮಾರ್ ಗಡಿಯಲ್ಲಿ ದಾಳಿ ನಡೆಸಿದೆ ಎನ್ನಲಾಗಿದೆ.
ಸೇನೆಯ ಮೂಲ ಟಾರ್ಗೆಟ್ ಅರಾಕನ್ ಆರ್ಮಿ್ಯಾಗಿದ್ದು, ಈ ಉಗ್ರ ಸಂಘಟನೆಗೆ ಚೀನಾ ಮೂಲದ ಕಚಿನ್ ಇಂಡಿಪೆಂಡೆಂಟ್ ಆರ್ಮಿ (ಕೆಐಎ) ನೇರ ಬೆಂಬಲ ನೀಡಿತ್ತು. ಈ ಕೆಐಎ ಉಗ್ರ ಸಂಘಟನೆಗೆ ಚೀನಾ ಸೇನೆಯ ಬೆಂಬಲ ಕೂಡ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಕಾರಣಕ್ಕೆ ಮಯನ್ಮಾರ್ ಗಡಿಯಲ್ಲಿ ಭಾರತ ನಿರ್ಮಿಸುತ್ತಿರುವ ಬಹು ಉದ್ದೇಶಿತ ಕಲಾಡನ್ ಯೋಜನೆಗೆ ಅಡ್ಡಿ ಪಡಿಸಲೆಂದೇ ಈ ಕೆಐಎ ಉಗ್ರ ಸಂಘಟನೆ ಅರಾಕನ್ ಆರ್ಮಿಗೆ ಬೆಂಬಲವಾಗಿ ನಿಂತಿತ್ತು ಎನ್ನಲಾಗಿದೆ.
ಇದೀಗ ಭಾರತೀಯ ಸೇನೆ ಮಯನ್ಮಾರ್ ಸೇನೆಯೊಂದಿಗೆ ಕೈಜೋಡಿಸಿ ಅರಾಕನ್ ಆರ್ಮಿ ಉಗ್ರ ಸಂಘಟನೆಯ 12ಕ್ಕೂ ಹೆಚ್ಚು ಕ್ಯಾಂಪ್ ಗಳನ್ನು ಧ್ವಂಸ ಮಾಡಿದೆ. ಮಿಜೋರಾಂ, ನಾಗಾಲ್ಯಾಂಡ್ ನಿಂದ ಅರುಣಾಚಲ ಪ್ರದೇಶ ಗಡಿಯವರೆಗೂ ಹಬ್ಬಿದ್ದ 12ಕ್ಕೂ ಹೆಚ್ಚು ಉಗ್ರ ಕ್ಯಾಂಪ್ ಗಳನ್ನು ಇದೀಗ ಸೇನೆ ಧ್ವಂಸ ಮಾಡಿದೆ. ಈ ಬೃಹತ್ ಕಾರ್ಯಾಚರಣೆಗಾಗಿ ಭಾರತೀಯ ಸೇನೆ ತನ್ನ ಬೃಹತ್ ಸೇನಾ ತುಕಡಿಗಳನ್ನು, ವಿಶೇಷ ದಳಗಳನ್ನು, ಅಸ್ಸಾಂ ರೈಫಲ್ಸ್ ಹಾಗೂ ಮ್ಯಾನ್ಮಾರ್ ಸೇನೆಯನ್ನು ಬಳಕೆ ಮಾಡಲಾಗಿದೆ. ಕಾರ್ಯಾಚರಣೆಗೆ ಹೆಲಿಕಾಪ್ಟರ್, ಡ್ರೋನ್ ಮತ್ತು ಕಣ್ಗಾವಲು ಸಾಧನಗಳನ್ನು ಕೂಡ ಬಳಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಭಾರತ ಮತ್ತು ಮಯನ್ಮಾರ್ ದೇಶಗಳ ಕನಸಿನ ಯೋಜನೆ ಎಂದೇ ಹೇಳಲಾಗುತ್ತಿರುವ ಬಹು ಉದ್ದೇಶಿತ ಕಲಾಡನ್ ಯೋಜನೆ 2020ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos