ನವದೆಹಲಿ: ಪುಲ್ವಾಮಾ ದಾಳಿ ನಂತರ ಭಾರತ–ಪಾಕ್ ಗಡಿಯಲ್ಲಿ ಯುದ್ಧ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಅದೇ ಮಾದರಿಯಲ್ಲೇ ಭಾರತ–ಮಯನ್ಮಾರ್ ಗಡಿಯಲ್ಲಿಯೂ ಪ್ರಕ್ಷುಬ್ಧ ಸ್ಥಿತಿ ಉಂಟಾಗಿದೆ.
ಹೌದು.. ಭಾರತೀಯ ಸೇನೆ ಮತ್ತು ಮಯನ್ಮಾರ್ ಸೇನೆಗಳು ಜಂಟಿಯಾಗಿ ಗಡಿಯಲ್ಲಿನ ಉಗ್ರ ಕ್ಯಾಂಪ್ ಗಳ ಮೇಲೆ ದಾಳಿ ಮಾಡಿದ ಬಳಿಕ ಉಭಯ ದೇಶಗಳ ನಡುವಿನ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಬಂಡುಕೋರರು ಭಾರತದ ಗಡಿ ಪ್ರವೇಶಿಸದಂತೆ ಭಾರತೀಯ ಸೇನೆ ಎಚ್ಚರಿಕೆ ವಹಿಸಿದೆ.
ಈಶಾನ್ಯ ರಾಜ್ಯಗಳಲ್ಲಿನ ಮೂಲಸೌಕರ್ಯ ನಾಶಮಾಡಲು ಮ್ಯಾನ್ಮಾರ್ ನ ಅರಕಾನ್ ಆರ್ಮಿಗೆ ಸೇರಿದ ಬಂಡುಕೋರರ ಯತ್ನಿಸುತ್ತಿದ್ದು, ಅವರ ವಿರುದ್ಧ ಉಭಯ ದೇಶಗಳ ಸೇನೆ ಜಂಟಿ ಕಾರ್ಯಾಚರಣೆ ನಡೆಸಿತ್ತು. ಕೋಲ್ಕತ್ತಾ ಬಂದರಿನಿಂದ ಮ್ಯಾನ್ಮಾರ್ನ ಸಿಟ್ವೆ ಬಂದರಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಕಲಾಡನ್ ಬಹು ಉದ್ದೇಶಿತ ಸಾರಿಗೆ ಯೋಜನೆಯಲ್ಲಿ ಕೆಲಸಮಾಡುತ್ತಿರುವ ಭಾರತೀಯರಿಗೆ ಬಂಡುಕೋರರು ಬೆದರಿಕೆ ಹಾಕಿದ್ದು, ಹಣ ನೀಡುವಂತೆ ಪೀಡಿಸಿದ್ದರು. ಬಂಡುಕೋರರು ಸಿಡಿಸಿದ ಸುಧಾರಿತ ಸ್ಪೋಟಕಕ್ಕೆ ಮ್ಯಾನ್ಮಾರ್ ನ ಸೈನಿಕರೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿ ತಿಳಿಸಿದರು.
ಇದಕ್ಕಾಗಿ ಫೆಬ್ರುವರಿ 17ರಿಂದ ಮಾರ್ಚ್ 2ರವರೆಗೆ ಅಸ್ಸಾಂ ರೈಫಲ್ ಯುನಿಟ್ ನ 10 ಸಾವಿರ ಸೈನಿಕರನ್ನು ಭಾರತ–ಮ್ಯಾನ್ಮಾರ್ ಗಡಿಯಲ್ಲಿ ನಿಯೋಜಿಸಲಾಗಿದ್ದು, ಬಂಡುಕೋರರ ಶಿಬಿರಗಳನ್ನು ನಾಶಪಡಿಸಲಾಗಿದೆ ಎಂದು ತಿಳಿಸಿದರು.