ನವದೆಹಲಿ: ಭಾರತೀಯ ವಾಯುಸೇನೆ ಪಿಒಕೆಯಲ್ಲಿನ ಉಗ್ರ ಕ್ಯಾಂಪ್ ಗಳ ಮೇಲೆ ನಡೆಸಿದ್ದ ಏರ್ ಸ್ಟ್ರೈಕ್ ಗೆ ವಿಪಕ್ಷಗಳು ಸಾಕ್ಷಿ ಕೇಳುತ್ತಿರುವ ವಿವಾದದ ಬೆನ್ನಲ್ಲೇ ಇದೀಗ ಭಾರತೀಯ ಸೇನೆ ಮಯನ್ಮಾರ್ ಗಡಿಯಲ್ಲಿ ಮೆಗಾ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರ 12ಕ್ಕೂ ಹೆಚ್ಚು ಕೇಂದ್ರಗಳನ್ನು ಧ್ವಂಸ ಮಾಡಿದೆ ಎಂದು ಹೇಳಲಾಗುತ್ತಿದೆ.
ಹೌದು. ಇಡೀ ವಿಶ್ವವೇ ಭಾರತದ ವಾಯುಪಡೆ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ನಡೆಸಿದ ದಾಳಿಯ ನಂತರದ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಇತ್ತ ಭಾರತದ ಸೇನೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದ್ದು, ಭಾರತ, ಮ್ಯಾನ್ಮಾರ್ ಸೇನೆಯು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮಿಜೋರಾಂ ಗಡಿ ಪ್ರದೇಶದಲ್ಲಿ ನಿರ್ಮಾಣವಾಗಿದ್ದ 12ಕ್ಕೂ ಹೆಚ್ಚು ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಈ ಮೂಲಕ 3ನೇ ಸರ್ಜಿಕಲ್ ಸ್ಟ್ರೈಕ್ ಅನ್ನು ಭಾರತೀಯ ಸೇನೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಫೆ.17 ರಿಂದ ಮಾರ್ಚ್ 2ರ ಅವಧಿಯಲ್ಲಿ ಈ ದಾಳಿ ನಡೆಸಲಾಗಿದ್ದು, ಮ್ಯಾನ್ಮಾರ್ ನಲ್ಲಿ ತಲೆ ಎತ್ತಿದ್ದ ಅರಾಕನ್ ಆರ್ಮಿ ಉಗ್ರರ ನೆಲೆಗಳನ್ನು ನಾಶ ಪಡಿಸಲಾಗಿದೆ. ಅರಾಕನ್ ಆರ್ಮಿಗೆ ಕಚಿನ್ ಇಂಡಿಪೆಂಡೆನ್ಸ್ ಆರ್ಮಿ(ಕೆಐಎ) ಬೆಂಬಲ ನೀಡಿತ್ತು. ಈ ಎರಡು ಉಗ್ರ ಸಂಘಟನೆಗಳು ಮ್ಯಾನ್ಮರ್ ನಲ್ಲಿ ವಿಧ್ವಸಂಕ ಕೃತ್ಯಗಳನ್ನು ನಡೆಸುತ್ತಿದ್ದವು. ಭಾರತ ಯೋಜನೆಯನ್ನು ತಡೆಯಲು ಅರಾಕನ್ ಉಗ್ರರು ದೇಶದೊಳಗೆ ನುಸುಳಲು ಹುನ್ನಾರ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಆಧಾರಿಸಿ ಭಾರತ ಈ ಕಾರ್ಯಾಚರಣೆಯನ್ನು ನಡೆಸಿದೆ. ಚೀನಾದ ಗಡಿ ಪ್ರದೇಶದಿಂದ ಭಾರತಕ್ಕೆ ನುಸುಳಲು ಉಗ್ರರು ಸ್ಕೆಚ್ ರೂಪಿಸಿದ್ದರು. ಈ ಬಗ್ಗೆ ಭಾರತದ ಗುಪ್ತಚರ ಇಲಾಖೆಗೆ ಖಚಿತ ಲಭ್ಯವಾಗಿತ್ತು.
ಕಾರ್ಯಾಚರಣೆಯ ಮೊದಲ ಭಾಗವಾಗಿ ಮಿಜೋರಾಂ ಗಡಿ ಪ್ರದೇಶದಲ್ಲಿ ಹೊಸದಾಗಿ ನಿರ್ಮಾಣ ಮಾಡಿದ್ದ ಉಗ್ರರ ನೆಲೆಗಳನ್ನು ನಾಶ ಪಡಿಸಲಾಗಿದೆ. ಬಳಿಕ ನಾಗಾ ಉಗ್ರರ ಕೇಂದ್ರಗಳನ್ನು ಧ್ವಂಸ ಮಾಡಲಾಗಿದೆ. ಅರುಣಾಚಲ ಪ್ರದೇಶದಿಂದ 1 ಸಾವಿರ ಕಿಮೀ ದೂರದಲ್ಲಿದ್ದ ಉಗ್ರರ ಕೇಂದ್ರಗಳನ್ನು ನಾಶ ಪಡಿಸಲಾಗಿದೆ. 2 ವಾರದ ಕಾಲ ನಡೆದ ಈ ಆಪರೇಷನ್ ಮಾರ್ಚ್ 2 ರಂದು ಅಂತ್ಯವಾಗಿದೆ. ಭಾರತ ಸೇನೆಯ ವಿಶೇಷ ದಳಗಳು, ಅಸ್ಸಾಂ ರೈಫಲ್ಸ್ ಹಾಗೂ ಮ್ಯಾನ್ಮಾರ್ ಸೇನೆಯನ್ನು ಬಳಕೆ ಮಾಡಲಾಗಿದೆ. ಕಾರ್ಯಾಚರಣೆಗೆ ಹೆಲಿಕಾಪ್ಟರ್, ಡ್ರೋನ್ ಮತ್ತು ಕಣ್ಗಾವಲು ಸಾಧನಗಳನ್ನು ಕೂಡ ಬಳಕೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.