ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ್ದ ಉದ್ಯಮಿ ನೀರವ್ ಮೋದಿ ವಿರುದ್ಧ ಲಂಡನ್ ಕೋರ್ಟ್ ಬಂಧನ ವಾರೆಂಟ್ ಜಾರಿಗೊಳಿಸಿದೆ.
ಭಾರತದ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೀರವ್ ಮೋದಿಯನ್ನು ಗಡಿಪಾರು ಮಾಡುವುದಕ್ಕೆ ಮನವಿ ಮಾಡಿತ್ತು. ಭಾರತದ ಅಧಿಕಾರಿಗಳಿಗೆ ಮೊದಲ ಹಂತದ ಯಶಸ್ಸು ದೊರೆತಿದ್ದು ಲಂಡನ್ ಕೋರ್ಟ್ ನೀರವ್ ಮೋದಿ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸುಮಾರು 13,000 ಕೋಟಿ ರೂಪಾಯಿಗಳನ್ನು ವಂಚಿಸಿದ್ದ ನೀರವ್ ಮೋದಿ ಇತ್ತೀಚೆಗಷ್ಟೇ ಲಂಡನ್ ನಲ್ಲಿ ವರದಿಯಾಗಿತ್ತು. ಲಂಡನ್ ನ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನೀರವ್ ಮೋದಿ ವಿರುದ್ಧ ಜಾರಿಗೊಳಿಸಲಾದ ಬಂಧನ ವಾರೆಂಟ್ ಕುರಿತ ಮಾಹಿತಿ ಭಾರತದ ಅಧಿಕಾರಿಗಳಿಗೆ ಲಭ್ಯವಾಗಿದ್ದು, ಆತನನ್ನು ಶೀಘ್ರವೇ ವಶಕ್ಕೆ ಒಪ್ಪಿಸುವ ಸಾಧ್ಯತೆ ಇದೆ.
ಇದೇ ವೇಳೆ ನೀರವ್ ಮೋದಿ ಕೋರ್ಟ್ ಎದುರು ಹಾಜರಾಗಬೇಕಿತ್ತು, ಆತನ ಗಡಿಪಾರು ಪ್ರಕ್ರಿಯೆ ನಂತರದಲ್ಲಿ ಪ್ರಾರಂಭವಾಗಲಿದೆ.