ನವದೆಹಲಿ: ಪ್ರಧಾನಿ ಮೋದಿ ನಿಜವಾಗಿಯೂ ದೇಶದ 'ಚೌಕಿದಾರ'ರೇ ಆಗಿದ್ದರೆ ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣದ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಸವಾಲು ಹಾಕಿದ್ದಾರೆ.
ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ ಅವರನ್ನು ಕೋರ್ಟ್ ನಿರ್ದೋಷಿ ಎಂದು ತೀರ್ಪು ನೀಡಿತ್ತು. ಈ ವಿಚಾರವನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿರುವ ಅಸಾದುದ್ದೀನ್ ಒವೈಸಿ ನೀವು ನಿಜವಾದ ಚೌಕಿದಾರನಾಗಿದ್ದರೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ಎಂದು ಆಗ್ರಹಿಸಿದ್ದಾರೆ.
ಹೈದರಾಬಾದ್ ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಒವೈಸಿ, 'ನೀವೆಂತ ಕಾವಲುಗಾರರು ? ಸಂಜೋತಾ ಸ್ಫೋಟದಲ್ಲಿ 25 ಮಂದಿ ಭಾರತೀಯರು ಕೂಡಾ ಕೊಲ್ಲಲ್ಪಟ್ಟಿದ್ದರು. ಬಾಂಬ್ ಸ್ಫೋಟ ಉಗ್ರರ ಕೃತ್ಯ. ನೀವು ಹೇಗೆ ಕಾವಲುಗಾರರಾಗುತ್ತೀರಿ? ಎಂದು ಟೀಕಿಸಿದ್ದಾರೆ. ಅಂತೆಯೇ, 'ಮೋದಿ ನಿಜವಾಗಿಯೂ ಕಾವಲುಗಾರರೇ ಆಗಿದ್ದರೆ, ಪಂಚಕುಲ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಸರ್ಕಾರ ಮೇಲ್ಮನವಿ ಸಲ್ಲಿಸುತ್ತದೆ ಎಂದು ಘೋಷಿಸಬೇಕು. ದೇಶಕ್ಕೆ ಕಾವಲುಗಾರ ಬೇಕಾಗಿಲ್ಲ; ಪ್ರಾಮಾಣಿಕ ಪ್ರಧಾನಿ ಬೇಕು; ಜಾತ್ಯತೀತತೆ, ನ್ಯಾಯ, ಬ್ರಾತೃತ್ವ ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿದಿರುವ ದೇಶದ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬಲ್ಲ ವ್ಯಕ್ತಿಯ ಅಗತ್ಯ ದೇಶಕ್ಕೆ ಇದೆ' ಎಂದು ಪ್ರತಿಪಾದಿಸಿದರು.
ಭಾರತ- ಪಾಕಿಸ್ತಾನ ನಡುವೆ ಓಡಾಡುವ ಈ ರೈಲಿನಲ್ಲಿ 2007ರ ಫೆಬ್ರವರಿ 18ರಂದು ಹರ್ಯಾಣದ ಪಾಣಿಪತ್ ಬಳಿ ಸ್ಫೋಟ ಸಂಭವಿಸಿತ್ತು. 68 ಮಂದಿ ಬಲಿಯಾದ ಪ್ರಕರಣದ ಪ್ರಮುಖ ಆರೋಪಿಗಳಾದ ಅಸೀಮಾನಂದ ಮತ್ತು ಇತರ ಮೂವರನ್ನುಪಂಚಕುಲ ನ್ಯಾಯಾಲಯ ಬುಧವಾರ ದೋಷಮುಕ್ತಗೊಳಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos